ಬೆಂಗಳೂರು: ಉಪನ್ಯಾಸಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ, ಚಿತ್ರದುರ್ಗದ ಮುರುಘಾ ಶರಣರ ಸಹೋದರ ಎಂ.ಜೆ. ದೊರೆಸ್ವಾಮಿಗೆ ಜಾಮೀನು ನೀಡಲು ನಗರದ ನ್ಯಾಯಾಲಯ ನಿರಾಕರಿಸಿದೆ.
ಮದುವೆಯಾಗುವುದಾಗಿ ಹೇಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ 33 ವರ್ಷದ ಉಪನ್ಯಾಸಕಿಯೊಬ್ಬರು ನಗರದ ಆರ್ಎಂಸಿ ಯಾರ್ಡ್ ಠಾಣೆಗೆ ಜ.15 ರಂದು ದೂರು ನೀಡಿದ್ದರು.
ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿರುವ ಮಹಿಳೆ, 2019ರ ಸೆಪ್ಟೆಂಬರ್ನಲ್ಲಿ ಮಠದ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಅದೇ ವೇಳೆಯೇ ಅವರ ಮೊಬೈಲ್ ನಂಬರ್ ಪಡೆದಿದ್ದ ಆರೋಪಿ ದೊರೆಸ್ವಾಮಿ, ಸಂದೇಶ ಕಳುಹಿಸಲಾರಂಭಿಸಿದ್ದನು. ಕರೆ ಮಾಡಿ ಸಲುಗೆಯಿಂದ ಮಾತನಾಡಲಾರಂಭಿಸಿದ್ದನು.
ಪದೇ ಪದೇ ಸಂದೇಶ ಕಳುಹಿಸುವುದು ಹಾಗೂ ಕರೆ ಮಾಡುವುದು ತಮಗೆ ಇಷ್ಟವಿಲ್ಲವೆಂದು ಸಂತ್ರಸ್ತೆ ಹೇಳಿದ್ದರು. ಅಷ್ಟಾದರೂ ಆರೋಪಿ, ತಮ್ಮ ವರ್ತನೆ ಮುಂದುವರಿಸಿದ್ದರು. 2019ರ ಅಕ್ಟೋಬರ್ನಲ್ಲಿ ಬೆಂಗಳೂರಿನಲ್ಲಿ ಸಂತ್ರಸ್ತೆಯನ್ನು ಭೇಟಿಯಾಗಿದ್ದ ಆರೋಪಿ, ಮದುವೆಯಾಗುವುದಾಗಿ ಹೇಳಿ ಹೋಟೆಲೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ, ಬಳಿಕ ತಮ್ಮ ಬಳಿ ವಿಡಿಯೊ ಇರುವುದಾಗಿ ಆರೋಪಿ ಬ್ಲ್ಯಾಕ್ಮೇಲ್ ಮಾಡಲಾರಂಭಿಸಿದ್ದರು. ಜೀವ ಬೆದರಿಕೆಯನ್ನೂ ಒಡ್ಡಿದ್ದನು. ಎಂದು ಉಪನ್ಯಾಸಕಿ ದೂರಿನಲ್ಲಿ ತಿಳಿಸಿದ್ದಾರೆ.
ಚಿತ್ರದುರ್ಗ ಮುರುಘಾಮಠದ ಮುಖ್ಯ ಆಡಳಿತಾಧಿಕಾರಿಯೂ ಆಗಿರುವ ಎಂ.ಜಿ. ದೊರೆಸ್ವಾಮಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದರು ಎನ್ನಲಾದ ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಮಠದ ಕಾನೂನು ಸಲಹೆಗಾರ ಎನ್. ಗಂಗಾಧರ, ಜಂಗಮ ಸಮಾಜದ ಅಧ್ಯಕ್ಷ ಎಂ.ಟಿ. ಮಲ್ಲಿಕಾರ್ಜುನ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು, ನಿರೀಕ್ಷಣಾ ಜಾಮೀನು ಕೋರಿ ನಗರದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ದೊರೆಸ್ವಾಮಿಯ ಅರ್ಜಿಯನ್ನು ವಜಾಗೊಳಿಸಿದೆ. ಉಳಿದ ಆರೋಪಿಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.