ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತ್ ಚುನಾವಣೆಯ ಬಳಿಕ ಎರಡು ಅವಧಿಗೆ ಮೀಸಲಾತಿ ಘೋಷಣೆಯಾಗಿ ಅಧ್ಯಕ್ಷರ ಉಪಾಧ್ಯಕ್ಷರ ಸ್ಥಾನ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈಗ ಸಂಬಂಧವೇ ಇಲ್ಲದ ಮೀಸಲಾತಿ ಆದೇಶವನ್ನು ವಿಟ್ಲದಲ್ಲಿ ಜಾರಿ ಮಾಡಲು ಹೊರಟ ಕ್ರಮ ಸರಿಯಲ್ಲ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಹೇಳಿದ್ದಾರೆ.

ವಿಟ್ಲ ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಸದಾಗಿ ಘೋಷಣೆಯಾಗಿದ್ದ ವಿಟ್ಲ ಪಟ್ಟಣ ಪಂಚಾಯಿತಿಗೆ 2016 ರಲ್ಲಿ ಮೊದಲ ಅವಧಿಯ ಮೀಸಲಾತಿ ಘೋಷಣೆಯಾಗಿದ್ದು, ಹಿಂದುಳಿದ ವರ್ಗ ಎ (ಬಿಸಿಎ) ಅಧ್ಯಕ್ಷ ಹಾಗೂ ಪರಿಶಿಷ್ಠ ವರ್ಗದ ಮಹಿಳೆ (ಎಸ್ ಟಿ ಡಬ್ಲ್ಯು) ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿ ಪಡಿಸಲಾಗಿತ್ತು.

ಚುನಾವಣೆಯ ಸಂದರ್ಭದಲ್ಲಿ ಪರಿಶಿಷ್ಠ ವರ್ಗದ ಮಹಿಳೆಯ ಸ್ಥಾನ ಇಲ್ಲದ ಕಾರಣ ಸರ್ಕಾರಕ್ಕೆ ಈ ಬಗ್ಗೆ ಸ್ಪಷ್ಟೀಕರಣ ಕೇಳಿದ್ದು, ಪರಿಶಿಷ್ಠ ವರ್ಗದ ಪುರುಷರಿಗೆ (ಎಸ್ ಟಿ) ಸ್ಥಾನವನ್ನು ನೀಡಬಹುದೆಂದು 2018 ರಲ್ಲಿ ಆದೇಶ ಹೊರಡಿಸಿತ್ತು.

2018ರ ಸೆಪ್ಟೆಂಬರ್ ನಲ್ಲಿ ಎರಡನೇ ಅವಧಿಯ ಮೀಸಲಾತಿ ಷೋಷಣೆ ಮಾಡಿದ್ದು, ಪರಿಶಿಷ್ಟ ಜಾತಿ (ಎಸ್ ಸಿ) ಅಧ್ಯಕ್ಷ ಹಾಗೂ ಹಿಂದುಳಿದ ವರ್ಗ ಬಿ (ಬಿಸಿಬಿ) ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಯಿತು. ಆದರೆ ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ಮಾತ್ರ ಇದ್ದ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನ ಅವರಿಗೆ ಲಭಿಸಿತು. ಆದರೆ ಎರಡನೇ ಅವಧಿಯಲ್ಲಿ ಉಪಾಧ್ಯಕ್ಷರನ್ನು ಬದಲಾವಣೆ ಮಾಡದೆ ಮೊದಲ ಅವಧಿಯ ಮೀಸಲಾತಿಯನ್ನೇ ಮುಂದುವರಿಸಲಾಗಿತ್ತು ಎಂದು ಮಾಹಿತಿ ನೀಡಿದರು.

2020 ರಲ್ಲಿ ಮೀಸಲಾತಿ ಘೋಷಣೆಯಾದ ಸಮಯದಲ್ಲಿ ವಿಟ್ಲವೂ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಅದರಲ್ಲಿ ಎಸ್ ಟಿ ಅಧ್ಯಕ್ಷ ಹಾಗೂ ಬಿ.ಸಿ.ಎ.ಡಬ್ಲ್ಯು ಉಪಾಧ್ಯಕ್ಷ ಸ್ಥಾನ ಎಂದು ಘೋಷಣೆಯಾಗಿತ್ತು. ಆದರೆ ಇದನ್ನು ವಿಟ್ಲದಲ್ಲಿ ಜಾರಿ ಮಾಡುವ ಕಾರ್ಯ ಮಾಡಿರಲಿಲ್ಲ.

2020ರ ಅಕ್ಟೋಬರ್ ನಲ್ಲಿ ಇನ್ನೊಂದು ಮೀಸಲಾತಿ ಘೋಷಣೆ ಮಾಡಿ ಆರು ತಿಂಗಳಲ್ಲಿ ಚುನಾವನೆ ಎದುರಿಸಲಿರುವ ವಿಟ್ಲದಲ್ಲಿ ಅಧ್ಯಕ್ಷ ಸ್ಥಾನ ಜಿ. ಡಬ್ಲ್ಯು. ಹಾಗೂ ಉಪಾಧ್ಯಕ್ಷ ಬಿ.ಸಿ.ಎ.ಡಬ್ಲ್ಯು. ಎಂದು ಸೂಚಿಸಿದ್ದು, ಅಧಿಕಾರಿಗಳು ತಾಂತ್ರಿಕ ವಿಷಯದಲ್ಲಿ ಸಮಸ್ಯೆಗಳನ್ನು ಮಾಡಿಕೊಂಡು ಗೊಂದಲ ಏರ್ಪಡಿಸಲು ಮುಂದಾಗಿದ್ದಾರೆ ಎಂದರು.

ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿರುವುದು ಸರಿಯಲ್ಲ. ಪರಿಶಿಷ್ಠ ಜಾತಿ ಮೀಸಲಾತಿ ಸಂವಿಧಾನ ನೀಡಿದ ಹಕ್ಕನ್ನು ತೆಗೆದು ಇನ್ನೊಬ್ಬರಿಗೆ ನೀಡುವುದು ಸರಿಯಲ್ಲ. 18 ಸ್ಥಾನದಲ್ಲಿ ಕೇವಲ ಒಬ್ಬರು ಮಾತ್ರ ಎಸ್. ಸಿ. ಮಹಿಳೆ ಇದ್ದು, ಇನ್ನೊಬ್ಬರನ್ನು ಅಧ್ಯಕ್ಷ ಮಾಡಲು ಅವಕಾಶವಿಲ್ಲ. ಈಗ ಅವರನ್ನು ಬದಲಾವಣೆ ಮಾಡಲು ಹೊರಟಿರುವುದು ಪರಿಶಿಷ್ಠ ಜಾತಿಯ ಮಹಿಳೆಗೆ ಮಾಡಿದ ಘೋರ ಅನ್ಯಾಯವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.

ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ. ಕೆ. ಎಂ. ಅಶ್ರಫ್, ಇಂಟೆಕ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ಕುರುಂಬಳ ಉಪಸ್ಥಿತರಿದ್ದರು.










