ಕಡಬ: ಐತ್ತೂರು ರಕ್ಷಿತಾರಣ್ಯದಿಂದ ಮರ ಲೂಟಿ ಪ್ರಕರಣದ ದೂರು ದಾರನ ಮನೆಗೆ ರಾತ್ರೋ ರಾತ್ರಿ ನುಗ್ಗಿದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮನೆಯಲ್ಲಿ ದಾಂಧಲೆ ನಡೆಸಿದ ಘಟನೆ ಸಂಭವಿಸಿದೆ.

ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ಹಾಗೂ ಹದಿನೈದು ಮಂದಿ ಅಕ್ರಮವಾಗಿ ಮನೆಗೆ ನುಗ್ಗಿ ದೂರುದಾರ ಪ್ರಸಾದ್ ಗಾಗಿ ಹುಡುಕಾಟ ನಡೆಸಿದ್ದಾರೆ. ಗಸ್ತು ದಳದವರ ಜೊತೆ ಮರಗಳ್ಳತನದ ಆರೋಪ ಹೊತ್ತಿರುವ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೂಡ ಇದ್ದರು ಎಂದು ತಿಳಿದು ಬಂದಿದೆ. ಮನೆಗೆ ನುಗ್ಗಿದ ಅರಣ್ಯ ಅಧಿಕಾರಿಗಳು ಮನೆಯಲ್ಲಿ ಅಟ್ಟಕ್ಕೆ ಮುಚ್ಚಿಗೆ ಹಾಕಲಾಗಿದ್ದ ಮರದ ಹಳೆ ಹಲಗೆಗಳನ್ನು ಹೊತ್ತೊಯ್ದಿದ್ದಾರೆ ಎಂದು ಮನೆಯವರು ದೂರಿದ್ದಾರೆ.

ರಕ್ಷಿತಾರಣ್ಯದಲ್ಲಿ ಮರ ಲೂಟಿ ಬಗ್ಗೆ ದೂರು ನೀಡಿದ ಪ್ರಸಾದ್ ವಿರುದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.ದೂರುದಾರ ಪ್ರಸಾದ್ ಅವರ ವೃದ್ಧ ತಾಯಿಯ ಮೇಲೆ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಮಹಿಳೆ ಪುತ್ತೂರು ಆಸ್ಪತ್ರೆ ಗೆ ದಾಖಲಾಗಿದ್ದಾರೆ.










