ನವದೆಹಲಿ: ಕೆಲವು ಪ್ರದೇಶಗಳಲ್ಲಿ ಕೊರೊನಾ ವೇಗವಾಗಿ ಹರಡುತ್ತಿದ್ದು, ಅಂತಹ ಸೂಕ್ಷ್ಮ ವಲಯಗಳ ಮೇಲೆ ನಿಗಾ ಇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೊರೊನಾ ಸಂಬಂಧ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ, ಬಳಿಕ ಮುಖ್ಯಮಂತ್ರಿಗಳನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ದೇಶದಲ್ಲಿ ಕೊರೊನಾ ರಿಕವರಿ ರೇಟ್ ಶೇಕಡಾ 96 ರಷ್ಟಿದೆ. ಬೇರೆಲ್ಲಾ ದೇಶಗಳಿಗಿಂತ ಭಾರತದಲ್ಲಿ ಮರಣದ ಪ್ರಮಾಣ ಕಡಿಮೆ ಇದೆ.

ಕೆಲವು ಜಿಲ್ಲೆಗಳು ಕೊರೊನಾದಿಂದ ಸುರಕ್ಷಿತವಾಗಿದ್ದವು, ಇದೀಗ ಅಂತಹ ಜಿಲ್ಲೆಗೆ ಕೊರೊನಾ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿದೆ. ದೇಶದ 70 ಜಿಲ್ಲೆಗಳಲ್ಲಿ ಶೇಕಡಾ 150% ಸೋಂಕಿನ ಪ್ರಕರಣ ಹೆಚ್ಚಾಗಿದೆ. ಇದನ್ನು ನಾವು ಎದುರಿಸದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೊರೊನಾ ಕಾಣಿಸಿಕೊಂಡ ಬಳಿಕ ನಾವು ವಿವಿಧ ಅಲೆಗಳನ್ನ ಎದುರಿಸಬೇಕಾಯಿತು. ಇದೀಗ ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣ ವೇಗವಾಗಿ ಹೆಚ್ಚುತ್ತಿದೆ. ಅದರಲ್ಲೂ ಮಹರಾಷ್ಟ್ರ, ಮಧ್ಯಪ್ರದೇಶದಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಆದರೆ ಜನರಿಗೆ ನಾವು ಭಯ ಹುಟ್ಟಿಸುವ ಅಗತ್ಯ ಇಲ್ಲ. ಮುಂಜಾಗೃತ ಕ್ರಮಗಳ ಮೂಲಕ ಕೊರೊನಾವನ್ನ ಓಡಿಸಬಹುದು ಎಂದು ಸಿಎಂಗಳಿಗೆ ಮೋದಿ ಕರೆ ನೀಡಿದರು.

ಕೊರೊನಾ ಓಡಿಸಲು ಮೂರು ಸೂತ್ರಗಳನ್ನ ಇದೇ ವೇಳೆ ಪ್ರಸ್ತಾಪ ಮಾಡಿದರು. ಟೆಸ್ಟ್, ಟ್ರ್ಯಾಕ್, ಟ್ರೀಟ್ ಈ 3 ಸೂತ್ರಗಳ ಆಧಾರದ ಮೇಲೆ ನಾವು ಕೆಲಸ ಮಾಡಬೇಕಿದೆ. ಕೇರಳ, ಉತ್ತರ ಪ್ರದೇಶ, ಒಡಿಶಾದಲ್ಲಿ ಟೆಸ್ಟ್ ಮಾಡುವ ಪ್ರಮಾಣವನ್ನ ಹೆಚ್ಚಿಸಬೇಕಿದೆ. ಮೈಕ್ರೋ ಕಂಟೈನ್ಮೆಂಟ್ ಝೋನ್ ಮತ್ತೆ ಅಗತ್ಯವಿದೆ. ದೇಶದಲ್ಲಿ ಕೊರೊನಾ ಟೆಸ್ಟ್ ಸಾಮರ್ಥ್ಯ ಹೆಚ್ಚಿಸಬೇಕಿದೆ ಎಂದರು.










