ಪುತ್ತೂರು: ಹಿಂದೂ ಸಮಾಜದೊಳಗಿನ ಜಾತಿ ವೈಷಮ್ಯ ಮತ್ತಿತರ ಅಸಮಾನತೆಗಳನ್ನು ನಿವಾರಿಸಿ ಹಿಂದೂ ಧರ್ಮದಲ್ಲಿ ಒಗ್ಗಟ್ಟು ಮೂಡಿಸಿ ಭವಿಷ್ಯದ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಸಮಾಜವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಪುತ್ತೂರಿನಲ್ಲಿ ಮಾರ್ಚ್ 21ರಂದು ಹಿಂದೂ ಐಕ್ಯತಾ ಸಮಾವೇಶ ಏರ್ಪಡಿಸಲಾಗಿದೆ.
ಸುಮಾರು 15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಮಾ.17ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮಾವೇಶಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪುತ್ತೂರನ್ನು ಕೇಂದ್ರವಾಗಿಟ್ಟುಕೊಂಡು ಪ್ರತೀ ವರ್ಷ ಹಿಂದೂ ಐಕ್ಯತಾ ಸಮಾವೇಶ ನಡೆಸಲಾಗುತ್ತಿದೆ. ಇದು ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಲಿದೆ. ಹಿಂದೂ ಧರ್ಮದ ಒಗ್ಗಟ್ಟಿಗೆ ಕೊಡುಗೆ ನೀಡಲಿದೆ ಎಂದರು.
ಭವಿಷ್ಯದ ಸವಾಲುಗಳನ್ನು ಎದುರಿಸಲು ಹಿಂದೂ ಸಮಾಜ ಜಾತಿ ಭೇದ ಮರೆತು ಒಟ್ಟಾಗಬೇಕು. ಜಾಗರಣ ವೇದಿಕೆಯಲ್ಲಿ ಜಾತಿಯ ಪರಿಕಲ್ಪನೆಯೇ ಇಲ್ಲ. ಇಲ್ಲಿ ಎಲ್ಲ ಹಿಂದೂಗಳನ್ನು ಸಮಾನತೆಯಿಂದ ಪರಿಗಣಿಸಲಾಗುತ್ತದೆ.
ಜಾತಿ ಸಂಘಟನೆಗಳು ತಮ್ಮ ವೈಯಕ್ತಿಕ ಕಾರ್ಯಸೂಚಿಯ ಅಡಿಯಲ್ಲೇ ಕೆಲಸ ಮಾಡುತ್ತಿರುವಾಗ ಅದನ್ನೆಲ್ಲ ಮೆಟ್ಟಿ ನಿಂತು ಧರ್ಮದ ತಳಹದಿಯಲ್ಲಿ ರಾಷ್ಟಕ್ಕಾಗಿ ಸಂಕಲ್ಪ ಮಾಡಬೇಕಾದ ಅನಿವಾರ್ಯತೆ ಇದೆ. ಇದನ್ನು ಹಿಂಜಾವೇ ಮಾಡುತ್ತಲೇ ಬಂದಿದೆ.
ಜಾಗರಣ ವೇದಿಕೆ ಯಾವುದೇ ಪಕ್ಷದ ಮುಖವಾಣಿ ಅಲ್ಲ. ಯಾವುದಾದರೂ ಪಕ್ಷದವರು ನಮ್ಮಲ್ಲಿ ಗುರುತಿಸಿಕೊಂಡರೆ ನಾವು ಆ ಪಕ್ಷದವರು ಎಂಬ ಭಾವನೆ ಸರಿಯಲ್ಲ. ನಮ್ಮದು ಹಿಂದೂ ಧರ್ಮಕ್ಕಾಗಿ ಕೆಲಸ ಮಾಡುವ ಸಂಘಟನೆ ಎಂದರು.
ಮಾ.21ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ ವಠಾರದಲ್ಲಿ ಬೆಳಗ್ಗೆ ಸೂರ್ಯೋದಯದ ವೇಳೆ ಅರ್ಧ ಏಕಾಹ ಭಜನೆ ಆರಂಭಗೊಳ್ಳಲಿದೆ. ಸಂಜೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
ಸಂಜೆ 4 ಗಂಟೆಗೆ ದರ್ಬೆಯಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ. 5 ಗಂಟೆಗೆ ಸಮಾವೇಶ ನಡೆಯಲಿದ್ದು, ಸ್ವಾಮೀಜಿಗಳು ಮಾರ್ಗದರ್ಶನ ನೀಡಲಿದ್ದಾರೆ. ಹಿಂಜಾವೇ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಯೋಧ್ಯಾ ಕರಸೇವೆಯಲ್ಲಿ ಭಾಗವಹಿಸಿದವರಿಗೆ ಸನ್ಮಾನ ಕಾರ್ಯಕ್ರಮವಿದೆ.
ಸಾರ್ವಜನಿಕರ ಸೇವೆಗಾಗಿ ಹಿಂದೂ ಜಾಗರಣ ವೇದಿಕೆ ಕೊಡುಗೆಯಾಗಿ ನೀಡುತ್ತಿರುವ ಅಂಬ್ಯುಲೆನ್ಸ್ ಲೋಕಾರ್ಪಣೆ ಇದೇ ಸಂದರ್ಭ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ನಗರ ಅಧ್ಯಕ್ಷ ಪುಷ್ಪರಾಜ್ ದರ್ಬೆ, ತಾಲೂಕು ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರಕಟ್ಟೆ, ಜಿಲ್ಲಾ ಕಾರ್ಯದರ್ಶಿ ಚಿನ್ಮಯ ಈಶ್ವರಮಂಗಲ ಉಪಸ್ಥಿತರಿದ್ದರು.