ಉಳ್ಳಾಲ: ಮನೆಮಂದಿ ಮಲಗಿದ್ದಾಗಲೇ ಮೇಲ್ಛಾವಣಿಯ ಹಂಚು ಸರಿಸಿ ಒಳನುಗ್ಗಿದ ಕಳ್ಳರು ನಗ-ನಗದು ಕಳವುಗೈದ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ರಕ್ಷಾ ಕ್ಲಿನಿಕ್ ಬಳಿ ಗುರುವಾರ ತಡರಾತ್ರಿ ನಡೆದಿದೆ.
ಓವರ್ ಬ್ರಿಡ್ಜ್ ರಕ್ಷಾ ಕ್ಲಿನಿಕ್ ಬಳಿಯ ನಿವಾಸಿ, ನಿವೃತ್ತ ಬಿಎಸ್ಸೆನ್ನೆಲ್ ಉದ್ಯೋಗಿ ಜಯರಾಜ್ ಕೆ. ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ತಡರಾತ್ರಿ ಮನೆಮಂದಿ ನಿದ್ದೆ ಮಂಪರಿನಲ್ಲಿದ್ದ ವೇಳೆ ಹಂಚು ತೆಗೆದು ಒಳನುಗ್ಗಿದ ಕಳ್ಳರು 15 ಪವನ್ ಚಿನ್ನ, ರೂ.5,000 ನಗದನ್ನು ಕಳವುಗೈದಿದ್ದಾರೆ ಎಂದು ದೂರಲಾಗಿದೆ.
ಜಯರಾಜ್ ಅವರ ಪತ್ನಿ ಮರಣ ಹೊಂದಿದ್ದು ಮನೆಯಲ್ಲಿ ಅಮ್ಮ, ಇಬ್ಬರು ತಂಗಿಯಂದಿರ ಜೊತೆ ನೆಲೆಸಿದ್ದಾರೆ. ನಿನ್ನೆ ರಾತ್ರಿ ದೇವರ ಕೋಣೆಯ ಹಂಚು ಸರಿಸಿ ಒಳನುಗ್ಗಿದ ಕಳ್ಳರು ಹಾಲ್ ನಲ್ಲಿ ಇರುವ ಕಪಾಟಿನ ಬೀಗ ತೆಗೆದು 15 ಪವನ್ ಚಿನ್ನ ಮತ್ತು ಹೊರಗಡೆ ಇದ್ದ ಸುಮಾರು ರೂ.5,000ದಷ್ಟು ನಗದು, ಎರಡು ಸ್ಮಾರ್ಟ್ ಫೋನ್, ಒಂದು ಸಾಮಾನ್ಯ ಮೊಬೈಲ್ ಫೋನನ್ನು ದೋಚಿ ಪರಾರಿಯಾಗಿದ್ದಾರೆ.
ಅವರು ಪರಾರಿಯಾಗುವ ವೇಳೆ ಕೋಣೆಯಲ್ಲಿ ಮಲಗಿದ್ದ ಜಯರಾಜ್ ಅವರ ಹಿರಿಯ ತಂಗಿ ಹರಿಣಾಕ್ಷಿ ಎಚ್ಚರಗೊಂಡು ಬೊಬ್ಬೆ ಹೊಡೆದಿದ್ದು ಆ ವೇಳೆಗೆ ಕಳ್ಳರು ಓಡಿದ್ದಾರೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿದ್ದಾರೆ.