ಬೆಳ್ತಂಗಡಿ: ‘ತಾಲ್ಲೂಕಿನಲ್ಲೂ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಉಜಿರೆಯ ಲಾಯಿಲದಲ್ಲಿ ಕೋವಿಡ್ ಕೇರ್ ಸೆಂಟರ್, ಜನರ ಸ್ಪಂದನೆಗಾಗಿ ಸಹಾಯವಾಣಿ, ₹ 60 ಲಕ್ಷ ವೆಚ್ಚದಲ್ಲಿ ಲಿಕ್ವಿಡ್ ಆಕ್ಸಿಜನ್ನ ಸೆಂಟರ್ ಆರಂಭ ಹಾಗೂ ಹೊರಗುತ್ತಿಗೆಯಲ್ಲಿ ವೈದ್ಯರ, ದಾದಿಯರ ನೇಮಕಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ‘ಇದೇ 27ರ ಸಂಜೆಯೊಳಗೆ ಕೋವಿಡ್-19ಗೆ ಸಂಬಂಧಪಟ್ಟಂತೆ ಸಹಾಯವಾಣಿ ತೆರೆದು ತುರ್ತು ಸ್ಪಂದನೆಯ ದೂರವಾಣಿ ಸಂಖ್ಯೆ ನೀಡಲಾಗುವುದು. ಕೋವಿಡ್ ತಡೆಗಾಗಿ ತಹಶೀಲ್ದಾರ್, ಇಒ, ತಾಲ್ಲೂಕು ಆರೋಗ್ಯಾಧಿಕಾರಿ, ತಾಲ್ಲೂಕಿನ ಎಲ್ಲಾ ಪಿಡಿಒ, ಗಾಮಕರಣಿಕರನ್ನು ಕರೆದು ಈಗಾಗಲೇ ಒಂದು ಸುತ್ತಿನ ಚರ್ಚೆ ನಡೆಸಲಾಗಿದೆ’ ಎಂದು ಹೇಳಿದರು.
ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಕೊವೀಡ್ ಕೇರ್ ಸೆಂಟರ್ಗಾಗಿ ಲಾಯಿಲದಲ್ಲಿರುವ ಟಿ.ಬಿ.ಆಸ್ಪತ್ರೆಯನ್ನು ಒದಗಿಸಿಕೊಟ್ಟಿದ್ದಾರೆ. ತಾಲ್ಲೂಕಿನಲ್ಲಿ 207 ಸಕ್ರಿಯ ಕೋವಿಡ್ ಪ್ರಕರಣಗಳಿವೆ. 171 ಪ್ರಕರಣದ ಕೋವಿಡ್ ಸೋಂಕಿತರು ಅವರವರ ಮನೆಯಲ್ಲಿ ಹೋಂ ಐಸೋಲೇಶನ್ಯಲ್ಲಿದ್ದು ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.
ಲಾಯಿಲದ ಟಿ.ಬಿ.ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, 200 ಹಾಸಿಗೆ ವ್ಯವಸ್ಥೆ ಇದೆ. ಎಲ್ಲಾ ವಿಧದಲ್ಲೂ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.
‘₹ 60 ಲಕ್ಷ ವೆಚ್ಚದ ಲಿಕ್ವಿಡ್ ಆಕ್ಸಿಜನ್ ಸೆಂಟರ್ಗೆ ಎಸ್ಡಿಆರ್ಎಫ್ ಮೂಲಕ ನೀಡಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ವೈದ್ಯರನ್ನು ಹಾಗೂ ದಾದಿಯರನ್ನು ಹೊರ ಗುತ್ತಿಗೆಯಲ್ಲಿ ತೆಗೆದುಕೊಳ್ಳಲು ಜಿಲ್ಲಾಡಳಿತ ಅನುಮತಿಯನ್ನು ನೀಡಿದೆ. ನೇರವಾಗಿ ನಿಯೋಜನೆಗೊಳಿಸಲು ಅವಕಾಶವಿದ್ದು, ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.
‘ವಿದೇಶದಿಂದ, ಹೊರ ರಾಜ್ಯದಿಂದ ಬರುವವರಿಗೆ ತಮ್ಮ ಮನೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಸ್ವಇಚ್ಛೆಯಿಂದ ಆಯಾಯ ಗ್ರಾಮದ ಶಾಲೆಗಳಲ್ಲಿ ಕ್ವಾರೆಂಟೈನ್ ಆಗಲು ಅವಕಾಶ ಮಾಡಿಕೊಡುತ್ತೇವೆ. ಹೊರ ಭಾಗದಿಂದ ಬರುವವರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.