ಕಡಬ: ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೂ ಬಾಲಕನೋರ್ವನ ಜೀವಕ್ಕೆ ಅಪಾಯವಾಗುವ ಸಂಭವವಿದ್ದರೂ, ಅದೃಷ್ಟವಶಾತ್ ಬಾಲಕ ಗಾಯಗೊಂಡು ಅಪಾಯದಿಂದ ಪಾರಾದ ಘಟನೆ ಕೋಡಿಂಬಾಳ ಗ್ರಾಮದ ಕುತ್ಯಾಡಿ ಎಂಬಲ್ಲಿ ನಡೆದಿದೆ.
ಕುತ್ಯಾಡಿ ಎಂಬಲ್ಲಿ ತೋಡಿಗೆ ನಿರ್ಮಿಸಲಾಗಿದ್ದ ಕಿಂಡಿ ಅಣೆಕಟ್ಟಿನ ತಡೆಗೋಡೆಯನ್ನು ಮುಟ್ಟಿದ್ದ ಕುತ್ಯಾಡಿ ನಿವಾಸಿ ಮೋನಪ್ಪ ಗೌಡ ಎಂಬವರ ಪುತ್ರ ಧನ್ವಿತ್(10ವ.) ಎಂಬವರು ತಡೆಗೋಡೆಯ ಜತೆಗೆ ತೋಡಿಗೆ ಬಿದ್ದಿದ್ದಾನೆ, ಈ ಸಂದರ್ಭದಲ್ಲಿ ಧನ್ವಿತ್ನ ತಲೆ ಹಾಗೂ ಮೈಗೆ ಗಾಯವಾಗಿದೆ. ಗಾಯಗೊಂಡ ಬಾಲಕನಿಗೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಧನ್ವಿತ್ ಹಾಗೂ ಅವನ ತಮ್ಮ ದಕ್ಷಿತ್ ಆಟವಾಡಲೆಂದು ಮನೆಯ ಸಮೀಪವೇ ಇದ್ದ ತೋಟಕ್ಕೆ ಹೋಗಿದ್ದು ಈ ವೇಳೆ ದಾರಿಯಲ್ಲಿ ಇರುವ ಕಿಂಡಿ ಆಣೆಕಟ್ಟಿನ ತಡೆಗೋಡೆಯನ್ನು ಸ್ಪರ್ಶಿಸಿದ್ದಾರೆ, ಈ ವೇಳೆ ತಡೆಗೋಡೆಯ ಜತೆಗೆ ಧನ್ವಿತ್ ತೋಡಿಗೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಸಮೀಪದಲ್ಲಿದ್ದ ಸಹೋದರ ದಕ್ಷಿತ್ ಸಹಾಯಕ್ಕಾಗಿ ಮನೆಯವರನ್ನು ಕೂಗಿ ಕರೆದಿದ್ದಾರೆ.
ಮನೆಯಲ್ಲಿದ್ದ ಧನ್ವಿತ್ ನ ತಾಯಿ ವಾರಿಜ ಅವರು ತಕ್ಷಣ ಬಂದಿದ್ದರಾದರೂ ಅವರಿಗೆ ತೋಡಿಗೆ ಇಳಿಯಲಾಗದೆ ಇತರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ನೆರೆಮನೆಯ ವ್ಯಕ್ತಿಯೋರ್ವರು ಆಗಮಿಸಿ ತಡೆಗೋಡೆಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಬಾಲಕನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಬಾಲಕನ್ನು ಕಡಬ ಸಮುದಾಯ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಾಲಕನಿಗೆ ತಲೆ ಹಾಗೂ ಮೈಗೆ ಗಾಯವಾಗಿದೆ.
ಕಳಪೆ ಕಾಮಗಾರಿಯೇ ತಡೆಗೋಡೆ ಕುಸಿಯಲು ಕಾರಣ
ಕಿಂಡಿ ಆಣೆಕಟ್ಟಿನ ತಡೆಗೋಡೆಯ ಮೇಲೆ ಸಿಮೆಂಟ್ ಇಟ್ಟಿಗೆಯಲ್ಲಿ ಅವೈಜ್ಞಾನಿಕವಾಗಿ ಕಟ್ಟಿರುವುದರಿಂದ ಅದು ಕುಸಿದೆ ಬಿದ್ದಿದೆ. ಕಡಬ ಗ್ರಾಮ ಪಂಚಾಯತ್ ನ ಸುಮಾರು 3 ಲಕ್ಷ ಅನುದಾನದಲ್ಲಿ ಈ ಕಾಮಗಾರಿಯನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕೂಡಲೇ ಈ ಕಾಮಗಾರಿ ನಡೆಸಿದ, ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.