ಹೊಸದಿಲ್ಲಿ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಬಂಧನಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಊಹಾಪೋಹಗಳಿಗೆ ದೆಹಲಿ ಪೊಲೀಸರು ತೆರೆ ಎಳೆದಿದ್ದಾರೆ.
ಕುಸ್ತಿಪಟು ಸುಶೀಲ್ ಕಮಾರ್ ಮತ್ತು ಆತನ ಸಹವರ್ತಿಯನ್ನು ಇಂದು ಮುಂಜಾನೆ ದೆಹಲಿಯ ಮುಂದ್ಕಾ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ ಎಂದು ದೆಹಲಿ ಪೊಲೀಸರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕುಸ್ತಿ ಕೂಟದ ವೇಳೆ ಯುವ ಕುಸ್ತಿಪಟು ಸಾಗರ್ ರಾಣಾ ಅವರ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಘಟನೆ ನಡೆದ ದಿನದಿಂದಲೇ ನಾಪತ್ತೆಯಾಗಿದ್ದರು.
ವಿಶೇಷ ತಂಡದ ಇನ್ಸ್ ಪೆಕ್ಟರ್ ಶಿವಕುಮಾರ್ ಮತ್ತು ಕರಂಬೀರ್ ಹಾಗೂ ಎಸಿಪಿ ಅತ್ತರ್ ಸಿಂಗ್ ಅವರ ತಂಡವು ಸುಶೀಲ್ ಕುಮಾರ್ ಮತ್ತು ಅಜಯ್ ರನ್ನು ಮುಂದ್ಕಾ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿ ನೀರಜ್ ಥಾಕೂರ್ ಹೇಳಿಕೆ ನೀಡಿದ್ದಾರೆ.
ಸುಶೀಲ್ ಕುಮಾರ್ ಬಂಧನಕ್ಕೆ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಕುಸ್ತಿಪಟು ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ ನೀಡುವುದಾಗಿ ಘೋಷಿಸಿದ್ದರು.