ಗಾಡ್ವಾಲ: ರೈತನೊಬ್ಬ ತಾನು ಬೆಳೆದ ಬೆಳೆಯಿಂದ ಬಂದಿದ್ದ ಲಕ್ಷಾಂತರ ರೂಪಾಯಿ ಹಣವು ಬೆಕ್ಕಿನಿಂದಾಗಿ ಸುಟ್ಟು ಕರಲಾಗಿರುವ ಘಟನೆ ತೆಲಂಗಾಣದ ಜೊಗುಲಾಂಬ ಗಾಡ್ವಾಲ ಜಿಲ್ಲೆಯ ಕಾಟಿನ್ದೊಡ್ಡಿ ಮಂಡಲದಲ್ಲಿ ನಡೆದಿದೆ.
ಹಣ ಕಳೆದುಕೊಂಡ ರೈತ ವೀರೇಶ್. ಈತ ಬೆಳೆಸಿದ್ದ ಭತ್ತವನ್ನು ಸರ್ಕಾರಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದನು. ಜುಲೈ1ನೇ ತಾರೀಖಿನಂದು ಭತ್ತ ಮಾರಿದ 1 ಲಕ್ಷ ರೂ. ಹಣ ಆತನ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಶನಿವಾರದಂದು ಒಂದು ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಮನೆಗೆ ತಂದು ಹಣವನ್ನು ಬಟ್ಟೆಯಿಂದ ಸುತ್ತಿ ಬ್ಯಾಗ್ನಲ್ಲಿ ಇಟ್ಟಿದ್ದನು.
ವೀರೇಶ್ ಎಂದಿನಂತೆ ಸೋಮವಾರ ದೇವರಿಗೆ ದೀಪ ಹಚ್ಚಿ ಪೂಜೆ ಸಲ್ಲಿಸಿದ್ದರು. ಆದರೆ, ಅವರ ಅದೃಷ್ಟ ಚೆನ್ನಾಗಿರಲಿಲ್ಲ ಅನಿಸುತ್ತದೆ. ಏಕೆಂದರೆ, ಮನೆಯಲ್ಲಿದ್ದ ಬೆಕ್ಕು ಉರಿಯುತ್ತಿದ್ದ ದೀಪವನ್ನು ಬೀಳಿಸಿದೆ. ಆತನ ಮನೆ ಗುಡಿಸಲು ಮನೆಯಾದ್ದರಿಂದ ಬೆಂಕಿ ಹೊತ್ತಿಕೊಂಡು ಇಡೀ ಮನೆಯನ್ನು ಆವರಿಸಿದೆ. ಬೆಂಕಿಯ ಜ್ವಾಲೆಗೆ ಮನೆಯಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟಿದ್ದ 1 ಲಕ್ಷ ರೂ. ಹಣವು ಸುಟ್ಟುಕರಕಲಾಗಿದೆ. ಬೆಳೆ ಬೆಳೆಯಲು ಮಾಡಿದ್ದ 50 ಸಾವಿರ ರೂ. ಸಾಲವನ್ನು ತೀರಿಸುವುದಕ್ಕಾಗಿ ವೀರೇಶ್ ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದರು. ಆದರೆ, ವಿಧಿಯ ಆಟದಿಂದಾಗಿ ಹಣ ಮತ್ತು ಮನೆ ಕಳೆದುಕೊಂಡು ವೀರೇಶ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.