ನವದೆಹಲಿ: ಹಣಕಾಸು ವಂಚನೆಗೀಡಾದ ಬ್ಯಾಂಕ್ಗಳ ಠೇವಣಿದಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯೊಂದು ಕೊಟ್ಟಿದೆ. ಡೆಪಾಸಿಟ್ ಇನ್ಷೂರೆನ್ಸ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಕಾಯ್ದೆಗೆ ತಿದ್ದುಪಡಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಕುರಿತು ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅಧಿಕೃತ ಮಾಹಿತಿ ಹೊರಹಾಕಿದ್ದಾರೆ. ಬ್ಯಾಂಕಿನಿಂದ ವಂಚನೆಗೀಡಾದವರಿಗೆ ಠೇವಣಿ ಮಾಡಿದ ಒಟ್ಟು ಮೊತ್ತದ ಪೈಕಿ ಇನ್ಷೂರೆನ್ಸ್ ಹಣವಾದ 5 ಲಕ್ಷ ರೂಪಾಯಿ ನೀಡಲಾಗುವುದು. ಅದು ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ 90 ದಿನದೊಳಗೆ ಈ ಇನ್ಷೂರೆನ್ಸ್ ಹಣ ಸಿಗಲಿದೆ.
ಆರ್ಬಿಐ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ ಬಳಿಕ ಕಷ್ಟಕ್ಕೆ ಎದುರಾದ ಜನರಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಈ ಕಾಯ್ದೆಗೆ ಅನುಮೋದನೆ ನೀಡಲಾಗಿದೆ. ಕಾನೂನಿನಡಿ ಶೇ 98.3ರಷ್ಟು ಬ್ಯಾಂಕ್ ಖಾತೆಗಳು ಸಂಪೂರ್ಣ ಸುರಕ್ಷಿತ. ಡಿಐಸಿಜಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಗ ಸಂಸ್ಥೆ. ಇದು ಬ್ಯಾಂಕ್ ಠೇವಣಿಗೆ ಇನ್ಷೂರೆನ್ಸ್ ಒದಗಿಸುತ್ತದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.