
ಸುಳ್ಯ: ಬೆಳ್ಳಾರೆಯ ಉದ್ಯಮಿಯೊಬ್ಬರು ಸೆ.4 ರಿಂದ ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಸುಳ್ಯ ತಾಲುಕಿನ ಬೆಳ್ಳಾರೆಯಲ್ಲಿ ಸಂಭವಿಸಿದೆ. ನಾಪತ್ತೆಯಾದ ವ್ಯಕ್ತಿ ರಾಜೇಶ್ ಗುಂಡಿಗದ್ದೆ (47) ಎನ್ನಲಾಗಿದೆ.
ಸೆ.4 ರಿಂದ ಸುಳ್ಯ ಪೇಟೆಗೆ ಹೋಗಿ ಬರುವುದಾಗಿ ಹೇಳಿದವರು ಮನೆಗೆ ಬಾರದೆ, ಫೋನ್ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿರುವ ಬಗ್ಗೆ ಸೆ. 5ರಂದು ಅವರ ಪತ್ನಿ ವಿನಯಶ್ರೀಯವರು ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಕೃಷಿಕರಾಗಿರುವ ರಾಜೇಶ್ ರವರು ತಮ್ಮ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಸೆ.4ರಂದು ಮನೆಯಿಂದ ತೆರಳಿದ್ದಾರೆ. ಸುಳ್ಯಕ್ಕೆ ಆಗಮಿಸಿದ ಅವರು ಬಳಿಕ ಕಲ್ಲುಗುಂಡಿ ಪೇಟೆಯಾಗಿ ಸಂಪಾಜೆ ಕಡೆಗೆ ಪ್ರಯಾಣಿಸಿರುವ ದೃಶ್ಯ ಸಿ.ಸಿ. ಟೀವಿಯಲ್ಲಿ ಸೆರೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ
ರಾಜೇಶ್ ಅಧ್ಯಕ್ಷತೆಯ ಬೆಳ್ಳಾರೆ ರಬ್ಬರ್ ಉತ್ಪಾದಕರ ಸಂಘವೂ ಆಸುಪಾಸಿನ ಗ್ರಾಮಗಳ ರಬ್ಬರು ಬೆಳೆಗಾರರಿಂದ ರಬ್ಬರ್ ಹಾಲನ್ನು ಸಂಘಕ್ಕೆ ಖರೀದಿಸಿ ಒಂದಷ್ಟು ದಿನ ಬಿಟ್ಟು ಹಣ ನೀಡುವ ಪರಿಪಾಠ ಬೆಳೆಸಿಕೊಂಡಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಸಂಘವೂ ಹಾಲು ಹಾಕಿದ ಬೆಳೆಗಾರರಿಗೆ ಕೋಟಿ ಮೀರಿ ಹಣ ಕೊಡಲು ಬಾಕಿ ಇದೆ ಎನ್ನಲಾಗುತ್ತಿದೆ . ಇದರ ಜತೆಗೆ ಸಂಘದ ಹೆಸರಲ್ಲಿ ಪಡೆದ ಸಾಲ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಸಂಘದ ಹೆಸರಿನಲ್ಲಿರುವ ಸಾಲ ಮರುಪಾವತಿಸುವಂತೆ ಸಂಘದ ಕಟ್ಟಡದಲ್ಲಿ ಸ್ಥಳೀಯ ಬ್ಯಾಂಕೊಂದು ನೋಟೀಸ್ ಅಂಟಿಸಿದೆಯೆಂದು ಕೂಡ ಹೇಳಲಾಗುತ್ತಿದ್ದು ಆ ಬ್ಯಾಂಕಲ್ಲಿ ಸುಮಾರು 1ಕೋಟಿ 30 ಲಕ್ಷದಷ್ಟು ಸಾಲವಿದೆಯೆನ್ನಲಾಗಿದೆ. ಸಂಘವೂ ನಷ್ಟದಿಂದ ನಡೆಯುತ್ತಿರುವ ಹಿನ್ನಲೆ ಬೆಂಗಳೂರಿನ ಕಂಪೆನಿಯೊಂದಕ್ಕೆ ಅದನ್ನು ಮಾರಾಟ ಮಾಡಿ ಬೆಳೆಗಾರರಿಗೆ ಹಣ ಪಾವತಿಸುವ ನಿರ್ಣಯಕ್ಕೆ ಸಂಘದ ಮಹಾಸಭೆಯೂ ಬಂದಿತ್ತು. ಹಾಗೂ ಅದರಂತೆ ಒಬ್ಬರು ಖರೀದಿದಾರರು ಮುಂದೆ ಬಂದು ಮುಂಗಡ ಹಣ ಕೂಡ ಪಾವತಿಸಿದ್ದರು.
ಬಳಿಕ ಸಂಘದ ನಷ್ಟವನ್ನು ಸರಿದೂಗಿಸಲು ಕಷ್ಟವೆಂದು ಅಭಿಪ್ರಾಯಪಟ್ಟು ವ್ಯವಹಾರದಿಂದ ಹಿಂದೆ ಸರಿದರೆನ್ನಲಾಗಿದೆ. ಇತ್ತ ಎಲ್ಲ ಕಡೆಯಿಂದಲೂ ಹಣ ಪಾವತಿಯ ಒತ್ತಡ ಏರುತ್ತಾ ಹೋದಂತೆ ಸಂಘದ ಅಧ್ಯಕ್ಷರು ನಾಪತ್ತೆಯಾಗಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದೂ, ಹಣ ಸಿಗಬೇಕಾದವರ ಮನದಲ್ಲಿ ಆತಂಕ ಮನೆ ಮಾಡಿದೆ.

