ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ವಿರುದ್ಧದ ಪಾಕ್ ಗೆಲುವಿನ ಸಂಭ್ರಮ ಪಡುವುದು ದೇಶದ್ರೋಹದ ಅಡಿಯಲ್ಲಿ ಒಳಪಡುವುದಿಲ್ಲ ಎಂದು ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಾಧೀಶ ದೀಪಕ್ ಗುಪ್ತಾ ಹೇಳಿದ್ದಾರೆ. ಇದು ದೇಶದ್ರೋಹವಾಗಿರಬಹುದು ಎಂದು ಯೋಚಿಸುವುದು ಕೂಡಾ ಹಾಸ್ಯಾಸ್ಪದ ಸಂಗತಿ ಎಂದರು.
ನ್ಯಾಯಾಲಯದಲ್ಲಿ ಅಪರಾಧವಾಗಿ ಎಂದಿಗೂ ನಿಲ್ಲದ ಇಂತಹ ಪ್ರಕರಣಗಳಿಗಾಗಿ ಜನರನ್ನು ನ್ಯಾಯಾಲಯದ ಎದುರು ಆರೋಪಿಗಳಂತೆ ನಿಲ್ಲಿಸುವುದಕ್ಕಿಂತ ಮಾಡಲು ಬೇರೆ ಹಲವಾರು ಕೆಲಸಗಳಿವೆ. ಇದು ಸಾರ್ವಜನಿಕ ಸಮಯ ಮತ್ತು ಹಣವನ್ನು ಪೋಲು ಮಾತ್ರ ಮಾಡುತ್ತದೆ’ ಎಂದು ಅವರು ಹೇಳಿದ್ದಾರೆ. ಹಲವಾರು ಮಂದಿಗೆ ಇದು ಆಕ್ಷೇಪಾರ್ಹವೆನಿಸಬಹುದು, ಆದರೂ ಇದೊಂದು ಅಪರಾಧ ಕೂಡಾ ಅಲ್ಲ ಎನ್ನುವುದು ವಾಸ್ತವ ಎಂದಿದ್ದಾರೆ.
“ಕಾನೂನುಬದ್ದ ಕಾರ್ಯಗಳೆಲ್ಲಾ ‘ನೈತಿಕ ಅಥವ ಉತ್ತಮ’ ಕಾರ್ಯವಾಗಿ ಇರಲೇಬೇಕು ಎಂದೇನಿಲ್ಲ. ಮತ್ತು ಎಲ್ಲಾ ‘ಅನೈತಿಕ’ ಕಾರ್ಯಗಳು ಕಾನೂನು ಬಾಹಿರವಾಗಿರಬೇಕು ಎಂದಿಲ್ಲ. ಅದೃಷ್ಟವಶಾತ್ ನಮ್ಮ ಸರ್ಕಾರವು ಕಾನೂನಿಂದ ಆಳುತ್ತದೆಯೇ ವಿನಃ, ನೈತಿಕತೆಯ ನಿಯಮಗಳಿಂದ ಆಳುವುದಿಲ್ಲ. ನೈತಿಕತೆಯು ಬೇರೆ ಬೇರೆ ಸಮಾಜಗಳಲ್ಲಿ, ಬೇರೆ ಬೇರೆ ಕಾಲಘಟ್ಟದಲ್ಲಿ ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಲ್ಪಡುತ್ತದೆ” ಎಂದು ದೀಪಕ್ ಗುಪ್ತಾ ತಿಳಿಸಿದ್ದಾರೆ.
ಇದೇ ಪ್ರಕರಣದ ಹಿನ್ನೆಲೆಯಲ್ಲಿ ಮಾತನಾಡಿದ ಜಸ್ಟೀಸ್ ಗುಪ್ತಾ, ಪಾಕಿಸ್ತಾನ ವಿಜಯವನ್ನು ಸಂಭ್ರಮಿಸಿದ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಕಛೇರಿ ಮಾಡಿದ ಘೋಷಣೆಯು ಈ ನೆಲದ ಕಾನೂನಿಗೆ ವಿರುದ್ಧವಾಗಿರುವುದು ಹಾಗೂ ಜವಾಬ್ದಾರಿಯುತವಾದುದಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಪಾಕ್ ವಿಜಯ ಸಂಭ್ರಮಿಸಿದ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ದಾಖಲಾದ ಪ್ರಕರಣಗಳು ಸಮರ್ಥನೀಯವಲ್ಲ ಎಂದಿರುವ ಜಸ್ಟೀಸ್ ಗುಪ್ತಾ, ಧಾರ್ಮಿಕ ಆಧಾರದ ಮೇಲೆ ಧ್ವೇಷ ಸಾಧಿಸುವುದು ಎಂದು ಪ್ರಕರಣ ದಾಖಲಾಗಿದೆ. ಆ ವಿದ್ಯಾರ್ಥಿಗಳು ಹಿಂದೂ ಧರ್ಮದ ವಿರುದ್ಧ ಏನಾದರೂ ಧ್ವೇಷಪೂರಿತ ಹೇಳಿಕೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಹಾಗಂತ ಪಾಕ್ ಗೆಲುವನ್ನು ಸಂಭ್ರಮಿಸಲು ನಾನು ಬೆಂಬಲಿಸುತ್ತಿಲ್ಲ. ಪಾಕ್ ಹಾಗೂ ಭಾರತ ನಡುವಿನ ಸಂಬAಧ ಗಮನಿಸಿದರೆ ಇದು ಬುಧ್ಧಿವಂತಿಕೆಯ ಲಕ್ಷಣವಲ್ಲ. ಹಾಗೆಂದು ಇದೊಂದು ಅಪರಾಧವೂ ಅಲ್ಲ ಎಂದು ಜಸ್ಟೀಸ್ ಗುಪ್ತಾ ಹೇಳಿದ್ದಾರೆ.