ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ




ವಿಟ್ಲ: 79ನೇ ಭಾರತ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ಆಶ್ರಯದಲ್ಲಿ “ಅಖಂಡ ಭಾರತ ಸಂಕಲ್ಪ ದಿನ” ಕಾರ್ಯಕ್ರಮ ಹಾಗೂ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ ಆ.09 ರ ಆದಿತ್ಯವಾರ ನಡೆಯಲಿದೆ.
1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ರಾತ್ರಿಯ ದುರಂತವನ್ನು ನೆನಪಿಸುತ್ತಾ, ಕಳೆದುಹೋದ ಭಾಗಗಳೆಲ್ಲವನ್ನೂ ಮತ್ತೆ ಒಂದುಗೂಡಿಸುವರೇ ಜನಜಾಗೃತಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆ.09 ಮಧ್ಯಾಹ್ನ 2 ಘಂಟೆಗೆ ಮಹಾತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದ ಬಳಿ ಸೇರಿ ಒಟ್ಟಾಗಿ ವೀರಕಂಬಕ್ಕೆ ಹೋಗಿ ಅಲ್ಲಿಂದ 2.30 ಕ್ಕೆ ಜಾಥಾ ಹೊರಡುವುದು.
ಮಧ್ಯಾಹ್ನ 2.30 ರಿಂದ ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ, ಮೆಲ್ಕಾರು ರಾಮದೇವ ಸಭಾಭವನ, ವೀರಕಂಭ ಶಾರದ ಭಜನಾ ಮಂದಿರದಿಂದ ಬಳಿಯಿಂದ ಏಕಕಾಲಕ್ಕೆ ವಾಹನ ಜಾಥಾ , ಉಮಾಶಿವ ದೇವಸ್ಥಾನ ಗೇರುಕಟ್ಟೆ, ಕಲ್ಲಡ್ಕಕ್ಕೆ ಸಾಗಲಿದೆ.
ಸಭಾ ಕಾರ್ಯಕ್ರಮವು ಸಂಜೆ 4.00 ಗಂಟೆಗೆ ಗೇರುಕಟ್ಟೆಯ ಉಮಾಶಿವ ದೇವಸ್ಥಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾರತೀಯ ವಾಯುಸೇನೆಯ ನಿವೃತ್ತ ಯೋಧ ಶಿವರಾಮ ಭಟ್ ಕೆ. ಅವರು ಗೌರವ ಉಪಸ್ಥಿತರಾಗಲಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.








