ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿ, ಆರು ಮಂದಿ ಸಾವಿಗೀಡಾದ ಘಟನೆ ಕುಂಬಳಗೋಡು ಸಮೀಪದ ಕಣಿಮಿಣಿಕೆ ಬಳಿ ಸಂಭವಿಸಿದೆ. ಆ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿಯೊಂದು ಪಲ್ಟಿಯಾಗಿ 2 ಕಾರು, 1 ಬೈಕ್ ಮೇಲೆ ಮಗುಚಿ ಬಿದ್ದು ಈ ಅಪಘಾತ ಸಂಭವಿಸಿದೆ.
ಒಂದು ಕಾರಿನಲ್ಲಿದ್ದ ನಾಲ್ವರು, ಇನ್ನೊಂದು ಕಾರಿನಲ್ಲಿದ್ದ ಒಬ್ಬರು ಹಾಗೂ ಬೈಕ್ನಲ್ಲಿದ್ದ ಇನ್ನೊಬ್ಬರು ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. ಕೆಎ 02 ಎಂಎಂ 7749 ನಂಬರಿನ ಕಾರಿನಲ್ಲಿದ್ದ ನಿಖಿತಾ ರಾಣಿ (29), ವೀಣಮ್ಮ(42), ಇಂದ್ರಕುಮಾರ್ (14), ಕೀರ್ತಿಕುಮಾರ್ (40) ಮೃತಪಟ್ಟಿದ್ದಾರೆ. ಈ ನಾಲ್ವರೂ ಮಾಗಡಿ ಮೂಲದವರು. ಕೆಎ 05 ಎಂಜೆ 9924 ನಂಬರಿನ ಕಾರಿನಲ್ಲಿದ್ದ, ಟೊಯೊಟಾ ಕಂಪನಿಯ ನೌಕರ ಟಿ.ಜೆ. ಶಿವಪ್ರಕಾಶ್ ಸಾವಿಗೀಡಾಗಿದ್ದಾರೆ. ಇನ್ನು ಬೈಕ್ನಲ್ಲಿದ್ದ ಜಿತಿನ್ ಬಿ. ಜಾರ್ಜ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸ್ಥಳದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದಿಂದಾಗಿ ಟ್ರಾಫಿಕ್ ಜಾಮ್ ಆಗಿದ್ದು, ಕುಂಬಳಗೋಡು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತಕ್ಕೆ ಕಾರಣವಾಗಿರುವ ಟಿಪ್ಪರ್ ಲಾರಿಯನ್ನು ಟೋ ಮಾಡಿ ತೆರವುಗೊಳಿಸಲಾಗಿದೆ.