Sunday, June 29, 2025
spot_imgspot_img
spot_imgspot_img

ಮೆಕ್ಯಾನಿಕಲ್ ಇಂಜಿನಿಯರ್ ಗೆ ಕೃಷಿಯ ಆಸಕ್ತಿ!! 13 ಎಕರೆ ಗುಡ್ಡದಲ್ಲಿ ಪಸರಿಸಿತು ಅಡಿಕೆ ಸಸಿಯ ಕಂಪು..ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅಡಿಕೆ ತೋಟದ ಬಗ್ಗೆ..

- Advertisement -
- Advertisement -

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳಲು ಮುಂದಾಗುತ್ತಿದ್ದೂ, ಅತೀ ಹೆಚ್ಚು ಧಾರಣೆ ಇರುವ, ಕಳೆದೆರಡು ವರ್ಷಗಳಿಂದ ಹೆಚ್ಚು ಫಸಲು-ಹೆಚ್ಚು ಆದಾಯ ತಂದುಕೊಟ್ಟ ಲಾಭದಾಯಕ ಅಡಿಕೆ ಕೃಷಿಯತ್ತ ಮನಸ್ಸು ಮಾಡುತ್ತಿದ್ದಾರೆ.

ಹೌದು ಇದಕ್ಕೆಲ್ಲಾ ಉದಾಹರಣೆ ಎಂಬಂತೆ ಹಳೇನೇರೆಂಕಿ ಗ್ರಾಮದ ಇಜ್ಜಾವು ನಿವಾಸಿ, ಮೆಕ್ಯಾನಿಕಲ್ ಇಂಜಿನಿಯರ್ ಯುವಕ ಶಿವಪ್ರಸಾದ್ ಆಚಾರ್ಯರು ಕೃಷಿಯಲ್ಲಿ ಮಾಡಿದ ಹೊಸ ಪ್ರಯತ್ನ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ತಮ್ಮ ಮನೆಯ ಹಿಂಬದಿಯ ಸುಮಾರು 13 ಎಕರೆ ಗುಡ್ಡೆಯನ್ನು ಇಳಿಜಾರು ರೀತಿಯಲ್ಲಿ ತಟ್ಟು ಮಾಡಿ, ಅದರಲ್ಲಿ ಸಸಿ ನೆಟ್ಟು ನಡುವೆ ರಸ್ತೆಯನ್ನು ಮಾಡಿ ಗುಡ್ಡದ ತುದಿಯಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ ಹನಿ ನೀರಾವರಿಯ ವ್ಯವಸ್ಥೆ ಕಲ್ಪಿಸಿದ್ದಾರೆ.

ಕಟ್ಟಡ ನಿರ್ಮಾಣ ವೃತ್ತಿಯಲ್ಲಿ ತೊಡಗಿಕೊಂಡಿರುವ ಇಂಜಿನಿಯರ್ ಆಚಾರ್ಯರು, ಕೊರೋನ ಕಾಲದಲ್ಲಿ ನಿಂತಿದ್ದ ಜೆಸಿಬಿ, ಹಿಟಾಚಿ ಗಳಿಗೆ ಕೆಲಸ ಕೊಟ್ಟು ತಮ್ಮ ಮನೆಯ ಹಿಂಬದಿಯ ಗುಡ್ಡವನ್ನು ಸುಮಾರು ಆರು ತಿಂಗಳುಗಳ ಕಾಲ ಅಗೆದು ಕೃಷಿಗೆ ಯೋಗ್ಯ ರೀತಿಯಲ್ಲಿ ಪರಿವರ್ತಿಸಿ ಪ್ರತೀ 6 ಗಿಡಗಳ ಮಧ್ಯೆ ವಾಹನ ತೆರಳಲು ದಾರಿ ನಿರ್ಮಿಸಿದ್ದಾರೆ.

ಮುಂದಾಲೋಚನೆಯೇ ಇಲ್ಲಿ ಹೆಚ್ಚು ಗಮನಸೆಳೆದಿರುವ ಸಂಗತಿ. ಮುಂಬರುವ ದಿನಗಳಲ್ಲಿ ಅಡಿಕೆ ಕೊಯ್ಲು, ಮದ್ದು ಸಿಂಪಡನೆ ಹೀಗೆ ಪ್ರತೀ ಕೆಲಸಕ್ಕೂ ಈ ದಾರಿಯು ಯೋಗ್ಯವಾಗುವ ರೀತಿಯಲ್ಲಿ ಇದ್ದು, ಗುಡ್ಡದ ತುತ್ತ ತುದಿಯ ವರೆಗೂ ಅಡಿಕೆ ಕೃಷಿಯ ಕಂಪು ಪಸರಿಸಿದೆ.

ನಿರ್ಮಿತವಾದ ಅಡಿಕೆ ತೋಟದಲ್ಲಿ ಅರ್ಧದಷ್ಟು ಮಂಗಳ ಹಾಗೂ ಇನ್ನರ್ದದಷ್ಟು ರತ್ನಗಿರಿ ತಳಿಯ ಸಸಿಗಳಿದ್ದು, ಇವುಗಳಿಗೆ ನೀರುಣಿಸಲು ಬೃಹತ್ ಟ್ಯಾಂಕ್ ನಿರ್ಮಿಸಿ, ಕೊಳವೆ ಬಾವಿಯಿಂದ ಟ್ಯಾಂಕ್ ಗೆ ನೀರು ತುಂಬಿಸಿ ಅದರಿಂದ ಹನಿ ನೀರಾವರಿಯ ವ್ಯವಸ್ಥೆ ಮಾಡಲಾಗಿದೆ.

ಸದ್ಯ ಇವರ ಕೃಷಿ ತೋಟವು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ತೋಟ ವೀಕ್ಷಣೆಗೂ ಉತ್ಸಾಹಿಗಳು ಬರುತ್ತಿದ್ದಾರೆ.

✍️ದೀಪಕ್ ಹೊಸ್ಮಠ

- Advertisement -

Related news

error: Content is protected !!