ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತ್’ನಲ್ಲಿ ಮುಖ್ಯಾಧಿಕಾರಿ, ಆರೋಗ್ಯ ನಿರೀಕ್ಷಕರು, ಕಂದಾಯ ನಿರೀಕ್ಷಕರು, ಎಂಜಿನಿಯರ್’ಗಳು ಇಲ್ಲದೇ ಜನರು ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುವ ದುಸ್ಥಿತಿ ಬಂದಿದ್ದು, ಈ ಸಮಸ್ಯೆಯನ್ನು ಸರಿಪಡಿಸದಿದ್ದಲ್ಲಿ ಇದರ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಹೇಳಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿಟ್ಲ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿದ 6 ತಿಂಗಳಲ್ಲಿ ಮುಖ್ಯಾಧಿಕಾರಿ, ಆರೋಗ್ಯ ನಿರೀಕ್ಷಕರು, ಕಂದಾಯ ನಿರೀಕ್ಷಕರು, ಪ್ರಭಾರ ಅಭಿಯಂತರರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ವಿಟ್ಲದ ಆಡಳಿತ ವ್ಯವಸ್ಥೆ ತುಕ್ಕು ಹಿಡಿದಿದೆ ಎಂದರು. ವಿಟ್ಲ ನಾಗರೀಕರಿಗೆ ಪಟ್ಟಣ ಪಂಚಾಯಿತಿಯಲ್ಲಿ ಒಂದೇ ಒಂದು ಕೆಲಸವೂ ಆಗುತ್ತಿಲ್ಲ. ಮುಖ್ಯಾಧಿಕಾರಿ ಹೊರತು ಪಡಿಸಿ ಬೇರೆಲ್ಲರೂ ವಾರದ 2 ದಿನಗಳಿಗೆ ನಿಯೋಜಿಸಲ್ಪಟ್ಟಿದ್ದರು. ಈಗ ಮುಖ್ಯಾಧಿಕಾರಿಯೂ ವರ್ಗಾವಣೆಯಾಗಿ ಎಲ್ಲಾ ಅಧಿಕಾರಿಗಳೂ ನಿಯೋಜನೆಯಲ್ಲೇ ಇರುವುದು ನಾಗರೀಕರ ಅಲೆದಾಟವನ್ನು ಹೆಚ್ಚಿಸಿದೆ. ವಿಟ್ಲ ವಿಧಾನ ಸಭಾ ಕ್ಷೇತ್ರ ಹೋದ ಬಳಿಕ ವಿಟ್ಲ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ ಎಂದು ಆರೋಪಿಸಿದರು.
ಒಕ್ಕೆತ್ತೂರು ಜನತಾ ಕಾಲನಿಯ ಪ್ರಾರಂಭಿಸಿದ ಉದ್ಯಾನವನ ಇನ್ನೂ ಪೂರ್ಣವಾಗಿಲ್ಲ. 5ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಸವಿಲೇವಾರಿ ಘಟಕದಲ್ಲಿ ಎರೆಹುಳ ಘಟಕ ಇನ್ನೂ ಕಾರ್ಯಾಚರಿಸುತ್ತಿಲ್ಲ. ಮೀನು ಮಾರುಕಟ್ಟೆ ಉದ್ಘಾಟನೆಯಾದರೂ ಬಾಗಿಲು ತೆಗೆಯುತ್ತಿಲ್ಲ. ಸಂತೆಮಾರುಕಟ್ಟೆಯ ಸುಂಕವನ್ನೂ ವಸೂಲಾತಿ ಮಾಡದೆ ಪಂಚಾಯಿತಿಗೆ ನಷ್ಟ ಉಂಟಾಗುತ್ತಿದೆ. ಪಟ್ಟಣ ಪಂಚಾಯಿತಿಯ ನೇರ ಹೊಣೆ ಇರುವ ಶಾಸಕರಲ್ಲಿ ಎಷ್ಟು ಮನವಿ ಮಾಡಿದರೂ ಯಾವ ಕೆಲಸ ಕಾರ್ಯಕ್ಕೂ ಮುಂದಾಗುತ್ತಿಲ್ಲ ಎಂದು ಹೇಳಿದರು.
ಪಂಚಾಯಿತಿ ಸದಸ್ಯ ವಿ.ಕೆ.ಎಂ. ಅಶ್ರಫ್, ಪದ್ಮ ಪೂಜಾರಿ, ಅಬ್ದುಲ್ ರಹಿಮಾನ್ ಹಸೈನಾರ್ ನೆಲ್ಲಿಗುಡ್ಡೆ, ಲತಾವೇಣಿ ಉಪಸ್ಥಿತರಿದ್ದರು.