ಲಿಂಗರೂಪದಲ್ಲಿ ದುರ್ಗಾಪರಮೇಶ್ವರಿಯನ್ನು ಬಪ್ಪನಾಡು ಕ್ಷೇತ್ರದಲ್ಲಿ ಆರಾಧಿಸಲಾಗುತ್ತದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ಮುಸ್ಲಿಂ ಬಾಂಧವರೂ ಪ್ರಸಾದ ಸ್ವೀಕರಿಸಿದ ಉಲ್ಲೇಖವಿದೆ. ಧಾರ್ಮಿಕ ಸದ್ಭಾವನೆಯ ಕೇಂದ್ರದಂತಿದ್ದ ಈ ದೇವಾಲಯದಲ್ಲಿ ಈ ಬಾರಿಯ ಉತ್ಸವಕ್ಕೆ ಹಿಂದೂಯೇತರರಿಗೆ ವ್ಯಾಪಾರ ನಡೆಸಲು ನಿರ್ಬಂಧ ವಿಧಿಸಲಾಗಿದೆ ಅನ್ನುವ ಮಾತುಗಳು ಕೇಳಿ ಬಂದಿದೆ. ಕೇರಳದ ಮುಸ್ಲಿಂ ವ್ಯಾಪಾರಿ ಬಪ್ಪ ನಿರ್ಮಿಸಿದ ಈ ದೇಗುಲದಲ್ಲಿ ಈ ಬಾರಿಯ ಜಾತ್ರೋತ್ಸವದಲ್ಲಿ ಅನ್ಯಮತೀಯರು ವ್ಯಾಪಾರ ನಡೆಸಲು ಯಾವುದೇ ನಿರ್ಬಂಧವಿಲ್ಲ ಎಂದು ಅಲ್ಲಿನ ಆಡಳಿತ ಮೊಕ್ತೇಸರರು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಕೆಲದಿನಗಳಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಬಳಿ ಮತ್ತು ಮುಲ್ಕಿ ಬಸ್ ನಿಲ್ದಾಣದ ಬಳಿ ಹಾಕಲಾಗಿರುವ “ಮುಸ್ಲಿಮರಿಗೆ ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ” ಎಂಬ ಬ್ಯಾನರ್ ಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಮುಲ್ಕಿ ಸೀಮೆಯ ಅರಸರಾದ ದುಗಣ್ಯ ಸಾವಂತರು ಹಾಗೂ ಆಡಳಿತ ಮೊಸ್ತೇಸರರಾಗಿರುವ ಎನ್.ಎಸ್. ಮನೋಹರ ಶೆಟ್ಟಿ, ಅವರು ಸ್ಪಷ್ಟನೆ ನೀಡಿದ್ದಾರೆ.
ಮುಸ್ಲಿಮರು ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ-ವಹಿವಾಟು ನಡೆಸುವ ಕುರಿತು ದೇವಸ್ಥಾನದ ವತಿಯಿಂದ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ. ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಕೆಲವು ಮುಸ್ಲಿಮರು ಹಾಕಿದ್ದ ಅಂಗಡಿಗಳನ್ನು ಅವರೇ ತೆರವುಗೊಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಆಡಳಿತ ಮೊಕೇಸರರಾದ ಎಂ.ಎಸ್. ಮನೋಹರ ಶೆಟ್ಟಿ ಅವರು, ಯಾವುದೇ ಧರ್ಮದವರು ಅಮ್ಮನವರ ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ನಡೆಸುವ ಬಗ್ಗೆ ದೇವಸ್ಥಾನದ ಕಡೆಯಿಂದ ಯಾವುದೇ ನಿರ್ಬಂಧವಿಲ್ಲ. ಆದರೆ, ಅಹಿತಕರ ಘಟನೆಗಳು ನಡೆದರೆ ಎಲ್ಲರಿಗೂ ರಕ್ಷಣೆ ಕೊಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆಂದು ಬರುವ ಎಲ್ಲರಿಗೂ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಬಳಿಕ ಅವರು ಒಪ್ಪಿಗೆ ನೀಡಿದರೆ ವ್ಯಾಪಾರಕ್ಕೆ ಪರವಾನಿಗೆ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.