ಹಾಸನ: ಕಾರು ಓವರ್ ಟೇಕ್ ಮಾಡಿದ್ದಕ್ಕೆ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. ಘಟನೆ ಬಗ್ಗೆ ಮಾಹಿತಿ ನೀಡಿದರೂ 112 ನೆರವಿಗೆ ಬರಲಿಲ್ಲ ಎಂದು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬಿಸಿಲೆ ಘಾಟ್ ಬಳಿ ಈ ಘಟನೆ ನಡೆದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಮಾಹಿತಿ ಹಂಚಿಕೊಂಡಿದ್ದಾರೆ. ಮಹಿಳೆ ಮಕ್ಕಳಿದ್ದರೂ ಕುಡಿದ ಅಮಲಿನಲ್ಲಿದ್ದ ಪುಂಡರಿಂದ ದುರ್ವರ್ತನೆ ಹಾಗೂ ತಮ್ಮ ತಂದೆ ಮತ್ತು ಪತಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕೂಡಲೆ 100ಗೆ ಫೋನ್ ಮಾಡಿದರೆ ಅವರು 112ಗೆ ಕರೆ ಮಾಡೋಕೆ ಹೇಳಿದ್ರು. ಎಲ್ಲಾ ಮಾಹಿತಿ ಪಡೆದು ಬಳಿಕ ಸಮೀಪದ ಠಾಣೆಗೆ ಕರೆ ಮಾಡಿ ಎಂದು ಫೋನ್ ನಂಬರ್ ಕೊಟ್ಟರು. ಆ ನಂಬರ್ಗೆ ಫೋನ್ ಮಾಡಿದರೆ ಅವರು ತಮ್ಮ ವ್ಯಾಪ್ತಿಗೆ ಬರಲ್ಲ ಎಂದು ಮತ್ತೊಂದು ನಂಬರ್ ಕೊಟ್ಟರು. ಎರಡು ಗಂಟೆಯಾದರೂ ಪೊಲೀಸ್ ನಮ್ಮ ನೆರವಿಗೆ ಬರಲಿಲ್ಲ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.
ಅಕಸ್ಮಾತ್ ಯಾರಾದ್ರು ಕೊಲೆ ಮಾಡಿದ್ರು ಕೇಳೋರಿಲ್ಲವೇ. ನನ್ನ ಎರಡುವರೆ ವರ್ಷದ ಮಗು ಜೊತೆ ನಾವು ಸಾಕಷ್ಟು ಕಷ್ಟಪಟ್ಟೆವು. ಸಮಸ್ಯೆ ಇದ್ದಾಗ ಸಹಾಯ ಆಗದ ನಿಮ್ಮ ಸಹಾಯವಾಣಿ ಏಕೆ ಬೇಕು. ಕೊನೆಗೆ ಯಸಳೂರು ಪೊಲೀಸರು ಸ್ಪಂದಿಸಿದ್ರು, ನಮಗೆ ಊಟ ಕೊಡಿಸಿ ದೂರು ಸ್ಚೀಕರಿಸಿದರು. ಮಾನವೀಯತೆಯಿಂದ ನಮಗೆ ನೆರವಾದರು ಎಂದು ಸಹಾಯ ಮಾಡಿದವರ ಬಗ್ಗೆ ಮಹಿಳೆ ಪ್ರಸಂಶೆ ವ್ಯಕ್ತಪಡಿಸಿದ್ದಾರೆ. ಬಳಿಕ ಮಾತನಾಡಿದ ಅವರು, ತುರ್ತು ಸ್ಪಂದನೆ ಇಲ್ಲದ ಮೇಲೆ 100, 112 ವ್ಯವಸ್ಥೆ ಯಾಕೆ ಎಂದು ಕಿಡಿ ಕಾರಿದ್ದಾರೆ. ಸದ್ಯ ಯಸಳೂರು ಪೊಲೀಸ್ ಠಾಣೆಯಲ್ಲಿ ಅಪರಿಚಿತರಿಂದ ಹಲ್ಲೆ ಎಂದು ದೂರು ದಾಖಲಾಗಿದೆ. ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ್ದ ಬೆಂಗಳೂರು ಮೂಲದ ಕುಟುಂಬದ ಮೇಲೆ ಈ ವೇಳೆ ಮತ್ತೊಂದು ಕಾರಿನಲ್ಲಿದ್ದ ಪಾನಮತ್ತರ ಗುಂಪಿನಿಂದ ಹಲ್ಲೆ ಆರೋಪ ಮಾಡಲಾಗಿದೆ.