ತುಮಕೂರು: ಪ್ರಿಯಕರ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ಪ್ರಿಯತಮೆ ಕೂಡ, ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರೋ ದಾರುಣ ಘಟನೆ ತುಮಕೂರಿನ ಅರೆಹಳ್ಳಿಯಲ್ಲಿ ನಡೆದಿದೆ.
ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ ಧನುಷ್ (23) ಹಾಗೂ ಅರೆಹಳ್ಳಿ ಗ್ರಾಮದ ಸುಷ್ಮಾ (22) ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯವನ್ನು ತಮ್ಮ ಮನೆಯಲ್ಲಿ ಹೇಳಿ, ಮದುವೆಗೂ ಒಪ್ಪಿಸಿದ್ದರು.
ಧನುಷ್ ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ. ಈಕೆ ಎಂಕಾಂ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮೇ.11ರಂದು ಊರಿನ ಜಾತ್ರೆಗೆ ಬರೋ ಸಂದರ್ಭದಲ್ಲಿ ನೆಲಮಂಗಲದ ಬಳಿಯ ಕುಲುವನಹಳ್ಳಿ ಬಳಿಯಲ್ಲಿ ಧನುಷ್ ಅಪಘಾತಗೊಂಡು, ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಇತ್ತ ಈ ವಿಷಯ ತಿಳಿಯುತ್ತಿದ್ದಂತ ಪ್ರಿಯತಮೆ ಸುಷ್ಮಾ ಕೂಡ, ಆಘಾತಗೊಂಡಿದ್ದಳು. ಪ್ರಿಯಕರ ಧನುಷ್ ಅಂತ್ಯಸಂಸ್ಕಾರದಲ್ಲೂ ಭಾಗಿಯಾಗಿದ್ದಂತ ಆಕೆ, ನಂತರ ಖಿನ್ನತೆಗೆ ಒಳಗಾಗಿದ್ದಳು. ಧನುಷ್ ಅಂತ್ಯಕ್ರಿಯೆ ಮುಗಿಸಿ ಬಂದ ನಂತರ ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.