

ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯಗೊಳಿಸಿ ಸೋಮವಾರ ಮರು ಆದೇಶ ಜಾರಿಗೊಳಿಸಿದೆ.
ಸರಕಾರಿ, ಖಾಸಗಿ ಕಚೇರಿ, ವಸತಿ ಸಮುಚ್ಚಯ, ಹೊಟೇಲ್, ಕ್ಲಬ್, ರೆಸ್ಟೋರೆಂಟ್, ಪಬ್, ಬಾರ್, ಛತ್ರ, ಸಿನೆಮಾ ಹಾಲ್, ವಿದ್ಯಾ ಸಂಸ್ಥೆ (5 ವರ್ಷ ಮೇಲ್ಪಟ್ಟ ಮಕ್ಕಳಿಗೆ) ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ಬಸ್, ಆಟೋ, ಮೆಟ್ರೋ ಹಾಗೂ ಟ್ರೈನ್, ಶಾಪಿಂಗ್ ಮಾಲ್ ಹಾಗೂ ಇತರೆ ಪ್ರದೇಶದಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯಗೊಳಿಸಲಾಗಿದೆ.
ಗಣೇಶೋತ್ಸವ ಮಾರ್ಗಸೂಚಿ
ಆ.31ರಂದು ಗಣೇಶೋತ್ಸವದ ಕಡ್ಡಾಯ ಮಾರ್ಗಸೂಚಿ ಪಾಲಿಸಲು ಆದೇಶಿಸಿದೆ. ಕಾರ್ಯಕ್ರಮವನ್ನು ಹೊರಾಂಗಣ ಪ್ರದೇಶದಲ್ಲಿ ಆಚರಿಸುವುದು, ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ, 1 ಮೀಟರ್ ಅಂತರದ ಪಾಲನೆ, ಸೂಚಿತ ಸ್ಥಳದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಲಭ್ಯತೆ, ಎಲ್ಲ ಅವಧಿಯಲ್ಲಿ ಮಾಸ್ಕ್ ಧಾರಣೆ, ಕೋವಿಡ್ ಲಸಿಕೆ ಪಡೆದಿರುವವರಿಗೆ ಭಾಗವಹಿಸಲು ಪ್ರೋತ್ಸಾಹ, ಲಕ್ಷಣ ಹೊಂದಿರುವವರನ್ನು ಪ್ರತ್ಯೇಕಿಸಿ ಚಿಕಿತ್ಸೆಗೆ ಪಡೆಯಲು ಶಿಫಾರಸು ಮಾಡಬೇಕಿದೆ. ರಾಜ್ಯದಲ್ಲಿ ಸಾಲು ಸಾಲು ಹಬ್ಬಗಳು ನಡೆಯಲಿರುವುದರಿಂದ, ಈ ವೇಳೆ ಕೊರೊನಾ ಮಾರ್ಗ ಸೂಚಿ ಪಾಲನೆ ಕಡ್ಡಾಯಗೊಳಿಸಲಾಗಿದೆ.
ರಾಜ್ಯದಲ್ಲಿ 659 ಪ್ರಕರಣ
ರಾಜ್ಯದಲ್ಲಿ ಸೋಮವಾರ 659ಮಂದಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.
ಬಾಗಲಕೋಟೆ 3, ಬಳ್ಳಾರಿ 10, ಬೆಳಗಾವಿ 7, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 450, ಶಿವಮೊಗ್ಗ 32, ಚಾಮರಾಜನಗರ 27,ಚಿಕ್ಕಮಗಳೂರು 17, ಮೈಸೂರು 13 , ಕೊಡಗು 12 , ಕೋಲಾರ, , ಚಿಕ್ಕಬಳ್ಳಾಪುರ 9, ರಾಮನಗರ, ಮಂಡ್ಯ 8, ರಾಯಚೂರು 7, ದಾವಣಗೆರೆ 5, ಕಲಬುರಗಿ 4, ಧಾರವಾಡ, ಉತ್ತರಕನ್ನಡ 3,ತುಮಕೂರು, ಯಾದಗಿರಿ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್ ವರದಿಯಾಗಿದೆ. ದಾವಣಗೆರೆ 30 ವರ್ಷದ ಯುವಕ ಹಾಗೂ 63 ವರ್ಷದ ಪುರುಷ ಸೋಂಕಿನಿಂದ ಮೃತಪಟ್ಟಿದ್ದಾರೆ.
