ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ಆಶ್ರಯದಲ್ಲಿ 51 ನೇ ವರ್ಷದ ಸಾರ್ವಜನಿಕ ವಿಟ್ಲ ದಸರಾ 2022ರ ಉದ್ಘಾಟನ ಸಮಾರಂಭ ಅನಂತ ಸದನ ವಿಟ್ಲದಲ್ಲಿ ನಡೆಯಿತು. ಬೆಳಗ್ಗೆ ಗಣಪತಿ ಹವನ, ಬಳಿಕ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ಹಾಗೂ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಯಿತು.
ನಂತರ ವಿಟ್ಲ ಜೈನ ಬಸದಿ ಬಳಿಯಿಂದ ವಿಟ್ಲ ಮುಖ್ಯ ರಸ್ತೆಯಲ್ಲಿ ಶ್ರೀ ಶಾರದೆ ಮೂರ್ತಿಯ ಮೆರವಣಿಗೆ ಸಾಗಿತು. ವಿಟ್ಲ ಅನಂತೇಶ್ವರ ದೇವಸ್ಥಾನದ ಅನಂತ ಸದನದಲ್ಲಿ ದೇವರ ಪ್ರತಿಷ್ಠೆ ನಡೆಯಿತು. ವೇದಮೂರ್ತಿ ಶ್ರೀ. ಎಂ. ವಿಕಾಸ್ ಭಟ್, ಶ್ರೀರಾಮ ಮಂದಿರ ವಿಟ್ಲ ಇವರು ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆಯನ್ನು ಹಲವು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿಕೊಟ್ಟರು. ವಿಟ್ಲ ದೇವತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಧ್ವಜರೋಹಣಗೈದರು.
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಜಗನ್ನಾಥ್ ಸಾಲಿಯಾನ್, ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಡಾ. ಕೆ ಪ್ರಭಾಕರ್ ಭಟ್ ಕಲ್ಲಡ್ಕ, ಅಧ್ಯಕ್ಷರು ವಿದ್ಯಾವರ್ಧಕ ಸಂಘ ಪುತ್ತೂರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ 51ನೇ ವರ್ಷದ ಸಾರ್ವಜನಿಕ ವಿಟ್ಲ ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಬಳಿಕ ಮಾತನಾಡಿ, “ಜ್ಞಾನದ ಕೊರತೆ ಇದೆ, ಅದನ್ನು ಕಲಿಸುವ ಕೆಲಸ ನಡೆಯಬೇಕು. ಜ್ಞಾನ ಸಂಕೇತವಾಗಿ ಶಾರದೆಯ ಆಚರಣೆ ಆಗುತ್ತಿದೆ. ಇದು ಶಕ್ತಿಯ ಆರಾಧನೆಯಾಗಿದೆ. ದೇಶ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದು, ಶಕ್ತಿಯ ಆರಾಧನೆ ಅಗತ್ಯವಾಗಿದೆ. ಹಿಂದುತ್ವದ ವಿರುದ್ಧವಾಗಿ ಯೋಚನೆಗಳು ನಡೆಯುತ್ತಿದೆ. ನಮ್ಮ ಅಕ್ಕಪಕ್ಕದಲ್ಲಿ ಭಯೋತ್ಪಾದಕರು ಇದ್ದಾರೆ. ಮುಂದಿನ ದಿನಗಳಲ್ಲಿ ಶಾರದೋತ್ಸವಕ್ಕೆ ಅಡ್ಡಿಯಾಗುವ ಸಾಧ್ಯತೆಗಳಿವೆ. ದೇವರ ಮೆರವಣಿಗೆಗೆ ಅಡ್ಡಿಯಾಗಲಿದೆ. ಶಕ್ತಿಯುತ, ಸಂಘಟಿತ ಹಿಂದೂ ಸಮಾಜ ಆಗಬೇಕು. ಶಾರದೆಯ ಪ್ರತಿಷ್ಠಾಪನೆ ಎಂಬುದು ಬಡವರ ಸೇವೆಯಾಗಿದೆ. ಆಶಕ್ತರನ್ನು ಗುರುತಿಸುವ ಕೆಲಸ ನಡೆಯಬೇಕು. ಜಾತಿ ನೋಡದೇ ನಾವೆಲ್ಲರೂ ಹಿಂದೂ ಎಂದು ನೋಡಿ ಸಹಾಯ ಮಾಡಬೇಕು. ದೇವಸ್ಥಾನಗಳು ಹಿಂದೂ ಸಮಾಜದ ಪರಿವರ್ತನೆ ಕೇಂದ್ರವಾಗಬೇಕು. ಹಿಂದೂ ಸಮಾಜದ ರಕ್ಷಣೆ ಮಾಡಿದಾಗ ಇಡೀ ದೇಶವನ್ನು ರಕ್ಷಣೆ ಮಾಡಿದಂತೆ” ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ದೇವತಾ ಸಮಿತಿಯ ಹಿರಿಯ ಸದಸ್ಯ ಎಂ ನಿತ್ಯಾನಂದ ನಾಯಕ್, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ನಾಯಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹನುಮಾನ್ ಪವರ್ ಪ್ರೆಸ್ನ ಮಾಲಕ, ಉದ್ಯಮಿ ವೆಂಕಟೇಶ್ ಭಟ್, ಹಿರಿಯ ಚಾಲಕ ಶೀನ ವಿ ಕಾಶಿಮಠ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ದೇವತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಸ್ವಾಗತಿಸಿ, ಪ್ರೇಮಾನಂದ ಭಟ್ ಪ್ರಾರ್ಥಿಸಿ, ಗೋಕುಲ್ ದಾಸ್ ಶೆಣೈ ವಂದಿಸಿದರು. ರಾಘವೇಂದ್ರ ಪೈ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಶ್ರೀ ಶಾರದಾ ಮಾತೆಯ ಕೃಪೆಗೆ ಪಾತ್ರರಾದರು.