ಬೆಳ್ತಂಗಡಿ: 2017 ರಲ್ಲಿ ಬೆಳ್ತಂಗಡಿ ತಾಲೂಕಿನ ರೇಷ್ಮೆರೋಡ್ ಎಂಬಲ್ಲಿ ಹಳೇ ದ್ವೇಷದಿಂದ ಪ್ರದೀಪ್ ಎಂಬವರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿ ದಿನೇಶ್ ನ್ಯಾಯತರ್ಪು ಎಂಬಾತ ಅಪರಾಧಿ ಎಂದು ಘೋಷಿಸಿ ನ್ಯಾಯಾಲಯ ಇಂದು ಜೀವವಾಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
2017 ರ ನವಂಬರ್ 24 ರಂದು ಆರೋಪಿ ದಿನೇಶ ಎಂಬಾತನು ತನ್ನ ಟಿಪ್ಪರ್ ಲಾರಿಯಲ್ಲಿ ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ರೇಷ್ಮೆ ರೋಡ್ ಬಳಿ ಮಧ್ಯಾಹ್ನ 1.30 ರ ಸಮಯದಲ್ಲಿ ಪ್ರದೀಪ ಎಂಬಾತನನ್ನು ಕಂಡು ಹಳೇ ದ್ವೇಷದಿಂದ ಕೊಲೆ ಮಾಡುವ ಉದ್ದೇಶದಿಂದ ಪ್ರದೀಪನನ್ನು ಕೈ ಸನ್ನೆ ಮಾಡಿ ಟಿಪ್ಪರ್ ಲಾರಿ ಬಳಿ ಕರೆದು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡ್ ನಿಂದ ಪ್ರದೀಪನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದ.
ಈ ಘಟನೆಗೆ ಸಂಬಂಧಿಸಿದಂತೆ ಅಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆಗೆ ಕೈಗೆತ್ತಿಕೊಂಡಿದ್ದ ಆ ಸಮಯದಲ್ಲಿ ಬೆಳ್ತಂಗಡಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ. ಪ್ರಸ್ತುತ ಕೊಡಗು ಜಿಲ್ಲೆಯ ಡಿ.ಸಿ ಆರ್ ಬಿ ಆಗಿರುವ ನಾಗೇಶ್ ಕದ್ರಿ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸದ್ರಿ ಚಾರ್ಜ್ಶೀಟ್ ಅನ್ನು ಕೈಗೆತ್ತಿಕೊಂಡ ಮಂಗಳೂರು ಮಾನ್ಯ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಕ್ಷ್ಯಾಧಾರಗಳ ಪ್ರಕಾರ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಜೀವವಾಧಿ ಶಿಕ್ಷೆ ಹಾಗೂ ಹತ್ತು ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಈಗಿನ ವೇಣೂರು ಎಎಸ್ಐ ಆಗಿರುವ ವೆಂಕಟೇಶ್ ನಾಯ್ಕ ಇವರು ಸಹಕರಿಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಶೇಖರ್ ಶೆಟ್ಟಿ ಅವರು ವಾದ ಮಂಡಿಸಿರುತ್ತಾರೆ.