ಶಿಕ್ಷಕನೇ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು ಆರೋಪಿ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾಗಿ ದೂರು ದಾಖಲಾಗಿದೆ. ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಟ್ಟೇರಿ ಗ್ರಾಮದ ಪ್ರೌಢಶಾಲೆ ಹಾಗೂ ಹೆಣ್ಣು ಮಕ್ಕಳ ವಸತಿ ಶಾಲೆಯ ಉಸ್ತುವಾರಿ ಚಿನ್ಮಯಾನಂದ ಬಂಧಿತ ಆರೋಪಿ ಶಿಕ್ಷಕ.
ವಸತಿ ಶಾಲೆಯ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪ ಈತನ ಮೇಲಿದೆ. ರಾತ್ರಿ ವೇಳೆ ವಸತಿ ಶಾಲೆ ಬಂದು ವಿದ್ಯಾರ್ಥಿನಿಯನ್ನು ಕೊಠಡಡಿಗೆ ಕರೆಸಿಕೊಂಡು ಅಶ್ಲೀಲ ವೀಡಿಯೋ ತೋರಿಸುತ್ತಿದ್ದ ಎನ್ನಲಾಗಿದೆ. ಬೇರೆಯವರಲ್ಲಿ ಹೇಳದಂತೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಲೈಂಗಿಕ ಕಿರುಕುಳ ನೀಡುತ್ತಿದ್ದ ವೇಳೆ ವಿದ್ಯಾರ್ಥಿನಿಯರು ಕೂಗಿಕೊಂಡಿದ್ದು, ವಿದ್ಯಾರ್ಥಿನಿಯರ ಚೀರಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕಾಗಮಿಸಿದ್ದಾರೆ.
ಈ ವೇಳೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಸ್ಥಳದಲ್ಲಿ ಜಮೆಯಾದ ಪೋಷಕರು, ಸ್ಥಳೀಯರು ಆರೋಪಿ ಶಿಕ್ಷಕನ ಅಮಾನತು ಮಾಡಲು ಒತ್ತಾಯಿಸಿದ್ದಾರೆ.