





ಕನ್ಯಾನ: ಕನ್ಯಾನ ಗ್ರಾಮದ ಬಾಳೆಕೋಡಿ ಎಂಬಲ್ಲಿನ ಸರ್ವೆ ನಂ.291/1A2A1Bರಲ್ಲಿನ 2.25ಎಕರೆ ಸರಕಾರಿ ಜಮೀನು ಈ ಹಿಂದೆಯೇ ಹಿಂದೂ ರುದ್ರಭೂಮಿಗೆ ಮೀಸಲಿಡಲಾಗಿತ್ತು. ಆದರೆ ಇದೀಗ ಕನ್ಯಾನ ಗ್ರಾಮ ಪಂ. ಸದ್ರಿ ಜಮೀನಲ್ಲಿ 0.78ಎಕರೆ ಜಮೀನನ್ನು ಘನ ತ್ಯಾಜ್ಯ ಘಟಕ ಸ್ಥಾಪಿಸಲು ಕಾಮಗಾರಿ ಆರಂಭಿಸಿದೆ. ಇದು ಕನ್ಯಾನ ಪಂ.ನ ಹಿಂದೂ ವಿರೋಧಿ ಧೋರಣೆಯೆಂದು ಟೀಕಿಸಿರುವ ಸಾರ್ವಜನಿಕರು ಅದಕ್ಕಾಗಿ ಹಿಂದೂ ರುದ್ರಭೂಮಿ ಹೋರಾಟ ಸಮಿತಿಯನ್ನು ರಚಿಸಿದ್ದು ಆ ಮೂಲಕ ಉಗ್ರ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.

ಈ ಹಿಂದೆಯೂ ಇದೇ ಪರಿಸರದಲ್ಲಿ ಮದ್ಯದಂಗಡಿ(ಬಾರ್) ತೆರೆಯಲು ಸಾರ್ವಜನಿಕರ ಆಕ್ಷೇಪವನ್ನು ಲೆಕ್ಕಿಸದೇ ಗ್ರಾಮ ಪಂಚಾಯತ್ ಅನುಮತಿ ನೀಡಿತ್ತು. ಆದರೆ ಭಾರೀ ಹೋರಾಟದ ಬಳಿಕ ಮದ್ಯದಂಗಡಿ ಸ್ಥಳಾಂತರ ಮಾಡಿಸುವಲ್ಲಿ ಜನ ಯಶಸ್ವಿಯಾಗಿದ್ದರು. ಇದೀಗ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಮೀಸಲಿಟ್ಟ ಸ್ಥಳದಲ್ಲೇ ಘನತ್ಯಾಜ್ಯ ಘಟಕ ತೆರೆಯಲು ಈಗಾಗಲೇ ಕಾಮಗಾರಿ ಆರಂಭವಾಗಿದ್ದು ಒಟ್ಟಿನಲ್ಲಿ ಕನ್ಯಾನ ಗ್ರಾಮ ಪಂ.ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಹಿಂದೂ ರುದ್ರಭೂಮಿ ಹೋರಾಟ ಸಮಿತಿ ರಚನೆಯಾಗಿದ್ದು , ಅಧ್ಯಕ್ಷರಾಗಿ ಕೇಶವ ಕಾಣಿಚ್ಚಾರು, ಗೌರವಾಧ್ಯಕ್ಷರಾಗಿ ಪೂವಪ್ಪ ಗೌಡ ಕಾಣಿಚ್ಚಾರು, ಉಪಾಧ್ಯಾಕ್ಷರಾಗಿ ಪೂವಪ್ಪ ಗೌಡ ಬಾಳೆಕೋಡಿ, ರಾಜೇಶ್ ಭಟ್ ಕಾಣಿಚ್ಚಾರು, ಕಾರ್ಯದರ್ಶಿಯಾಗಿ ಜಯಪ್ರಸಾದ್ ಬಾಳೆಕೋಡಿ, ಜತೆ ಕಾರ್ಯದರ್ಶಿಯಾಗಿ ಸುಧಾಕರ್ ಗುರಿಮಾರ್ಗ, ಕೋಶಾಧಿಕಾರಿಯಾಗಿ ಬಾಳಪ್ಪ.ಎನ್ ಆಯ್ಕೆಯಾಗಿದ್ದಾರೆ.

ಸ್ಮಶಾನಕ್ಕೆ ಮೀಸಲಾಗಿರುವ 2.25ಎಕ್ರೆ ಭೂಮಿಯನ್ನು ಹಿಂದೂ ರುದ್ರಭೂಮಿಗೆ ಮಾತ್ರ ಮೀಸಲಿರಿಸಿ ಇತರ ಯಾವುದೇ ಉದ್ದೇಶಗಳಿಗೆ ಉಪಯೋಗಿಸಬಾರದು ಹಾಗೂ ಈಗ ನಿರ್ಮಿಸಿರುವ ಕಸ ವಿಲೇವಾರಿ ಘಟಕಕ್ಕೆ ಮೀಸಲಿರಿಸಿದ 0.78ಎಕ್ರೆ ಭೂಮಿಯನ್ನು ರದ್ದು ಪಡಿಸಬೇಕಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಿ, ಒಂದು ವಾರದೊಳಗೆ ಈ ತೀಮಾನಕ್ಕೆ ತಪ್ಪಿದ್ದಲ್ಲಿ ಉಗ್ರ ಹೋರಾಟದ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.