ರಾಮನಗರ: ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಅವರ ಫೋಟೊಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಸನ್ನ ಭಟ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದ ಪ್ರಸನ್ನ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಾವತ್ತೂರು ಕೆರೆಗೆ ಹೊಸ ವರ್ಷಾಚರಣೆ ಮಾಡಲು ಸಹೋದರ ಕೌಶಿಕ್ ಸೇರಿ ಐವರು ಸ್ನೇಹಿತರ ಜೊತೆ ಪ್ರಸನ್ನ ಬಂದಿದ್ದರು. ಈ ವೇಳೆ ಕೆರೆಯಲ್ಲಿ ಈಜಾಡಲು ಹೋಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಫೋಟೋಗ್ರಫಿ, ವಿಡಿಯೋಗ್ರಫಿಯಲ್ಲಿ ನಿಪುಣರಾಗಿದ್ದರು. ಕೆಲ ವರ್ಷದಿಂದ ಸಂಸದ ಬಿ.ವೈ.ರಾಘವೇಂದ್ರ ಅವರ ಫೋಟೊ ಗ್ರಾಫರ್ ಆಗಿ ಕಾರ್ಯ ನಿರ್ಹಿಸುತ್ತಿದ್ದರು. ಸಂಸದ ರಾಘವೇಂದ್ರ ಅವರ ಸಾಮಾಜಿಕ ಜಾಲತಾಣಗಳು, ಮೀಡಿಯಾ ವಿಭಾಗವನ್ನು ನಿರ್ವಹಣೆ ಮಾಡುತ್ತಿದ್ದರು.
ಸಂಸದ ಬಿ.ವೈ.ರಾಘವೇಂದ್ರ ಅವರು ಅಧಿವೇಶನದಲ್ಲಿದ್ದು, ಪ್ರಸನ್ನ ಅವರು ರಜೆಯಲ್ಲಿದ್ದ ಕಾರಣದಿಂದಾಗಿ ಕನಕಪುರದಲ್ಲಿದ್ದ ಸ್ನೇಹಿತ ಕೌಶಿಕ್ ಮನೆಗೆ ಬಂದಿದ್ದರು. ಮಾವತ್ತೂರು ಕೆರೆಯಲ್ಲಿ ಈಜಲು ಹೋದಾಗ ಪ್ರಸನ್ನ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಭಾನುವಾರ ರಾತ್ರಿ ಶವ ಪತ್ತೆಯಾಗಿದೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.