ಮಂಗಳೂರು: ರಸ್ತೆ ಅಭಿವೃದ್ಧಿ ನೆಪದಲ್ಲಿ ಸ್ಮಾರ್ಟ್ ಸಿಟಿ ಹಣ ಪೋಲು ಆರೋಪ: ಕಾಂಗ್ರೆಸ್ ಪ್ರತಿಭಟನೆ.
ಮಂಗಳೂರು: ಕದ್ರಿ ಪಾರ್ಕ್ ರಸ್ತೆ ಕಾಮಗಾರಿ ವಿಳಂಬ ಹಾಗೂ ಸ್ಮಾರ್ಟ್ ಸಿಟಿ ಹಣ ಪೋಲು ಮಾಡುತ್ತಿರುವ ಬಿಜೆಪಿ ಸರ್ಕಾರದ ನೀತಿಯನ್ನು ವಿರೋಧಿಸಿ ಮಾಜಿ ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸರ್ಕ್ಯೂಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಬದಲು 4ಕೋಟಿಗೆ ನಿಗದಿಯಾದ ಅಭಿವೃದ್ಧಿ ಕಾರ್ಯವನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 12 ಕೋಟಿಗೆ ಏರಿಸಿ ಯಾವುದೇ ದೂರ ದ್ರಷ್ಟಿಯಿಲ್ಲದೆ, ಮೂಲಭೂತ ಉದ್ದೇಶಗಳನ್ನು ಗಾಳಿಗೆ ತೂರಿ ಇದೀಗ ಈ ಕಾಮಗಾರಿಯನ್ನು ವಿಳಂಬ ಮಾಡಿ ಜನ ಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದಾರೆ.ನಾನು ಶಾಸಕನಾಗಿದ್ದಾಗ, ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದಾಗ ಶ್ರೀ. ರಮಾನಾಥ್ ರೈ ಹಾಗೂ ಯು.ಟಿ.ಖಾದರ್ ರವರು ಮಂತ್ರಿಯಾಗಿದ್ದಾಗ ನಗರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಯೋಜನೆ ಮಂಗಳೂರಿಗೆ ಬರುವಂತೆ ಮಾಡಿದ್ದೆವು.
ಬಿ.ಜೆ.ಪಿ ಶಾಸಕರು ಸ್ಮಾರ್ಟ್ ಸಿಟಿ ಮೂಲ ಉದ್ದೇಶವನ್ನು ಗಾಳಿಗೆ ತೂರಿ ಅದನ್ನು ಅನುಷ್ಠಾನ ಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.ನಾನು ಶಾಸಕನಾಗಿರುವ ಸಂದರ್ಭದಲ್ಲಿ ಅಮೃತ್ ಯೋಜನೆಯಲ್ಲಿ ಸುಮಾರು150ಕೋಟಿ ಎ.ಡಿ.ಬಿ 2ನೇ ಯೋಜನೆಯಲ್ಲಿ ಸುಮಾರು 600ಕೋಟಿ ರೂಪಾಯಿಯನ್ನು ನಗರದ ಮೂಲಭೂತ ಸೌಕರ್ಯಕ್ಕಾಗಿ ಸರಕಾರದಿಂದ ಮಂಜೂರು ಮಾಡಿಸಿದ್ದೇನೆ.ಆದರೆ ಅದನ್ನು ಅನುಷ್ಠಾನ ಗೊಳಿಸುವಲ್ಲಿ ಸ್ಥಳೀಯ ಶಾಸಕರು ವಿಫಲರಾಗಿದ್ದಾರೆ. ಕದ್ರಿ ಪಾರ್ಕ್ ಬಳಿ ನಡೆಯುವ ಕಾಮಗಾರಿ ಇವರ ವಿಫಲತೆಗೆ ಹಿಡಿದ ಕೈಗನ್ನಡಿ ಎಂದು ಹೇಳಿದರು.