

ಬಾಲಿವುಡ್ ಖ್ಯಾತ ನಟರಾದ ಅಮಿತಾಭ್ ಬಚ್ಚನ್, ಧರ್ಮೇಂದ್ರ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಗಳು ನಾಗ್ ಪುರ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕರೆ ಸ್ವೀಕರಿಸಿದ ಪೊಲೀಸರು ಕೂಡಲೇ ಮುಂಬೈ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆಯೇ ಮೂವರು ಗಣ್ಯ ವ್ಯಕ್ತಿಗಳಮನೆಗೆ ಧಾವಿಸಿದ ಪೊಲೀಸ್ ತಂಡ, ಶೋಧ ಕಾರ್ಯ ನಡೆಸಿದರು. ಆದರೆ, ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹಾಗಾಗಿ ಇದೊಂದು ಸುಳ್ಳು ಮಾಹಿತಿ ಎಂದು ಪೊಲೀಸರು ಇಲಾಖೆ ಮಾಹಿತಿ ನೀಡಿದ್ದಾರೆ. ಆದರೆ ಕಿಡಿಗೇಡಿಗಳ ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.
ದಾದರ್ ನಲ್ಲಿ ಶಸ್ತ್ರ ಸಜ್ಜಿತವಾದ 25 ಜನ ಭಯೋತ್ಪಾದಕರು ದಾಳಿಗೆ ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ. ಭಯೋತ್ಪಾದಕರು ಎಂದು ಹೇಳುತ್ತಿದ್ದಂತೆಯೇ ಪೊಲೀಸ್ ಅಲರ್ಟ್ ಆಗಿ ಕೂಡಲೇ ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಈ ಹಿಂದೆಯೂ ಇಂತಹ ಹುಸಿಕರೆಗಳು ಬರುತ್ತಿದ್ದು, ಸಲ್ಮಾನ್ ಖಾನ್ ಸೇರಿದಂತೆ ಹಲವರಿಗೆ ಜೀವ ಬೆದರಿಕೆಯನ್ನು ಹಾಕಲಾಗಿತ್ತು. ಅನೇಕ ಗಣ್ಯರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಅನೇಕ ಬಾರಿ ಹುಸಿಕರೆಗಳು ಬಂದಿದ್ದವು.