ಪುತ್ತೂರು : ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಸಂದರ್ಭದಲ್ಲಿ ದೇವಸ್ಥಾನದ ಗದ್ದೆಯಲ್ಲಿ ಅನ್ಯ ಮತೀಯರಿಗೆ ವ್ಯವಹಾರಕ್ಕೆ ಅನುಮತಿ ನೀಡದಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಮತ್ತು ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಗಳು ಮತ್ತು ಧರ್ಮಾದಾಯದತ್ತಿಗಳ ಕಾನೂನಿನ ಪ್ರಕಾರ – ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಅನ್ಯಮತೀಯರಿಗೆ ಅಂಗಡಿ ಮುಂಗಟ್ಟುಗಳನ್ನು ಇಟ್ಟು ವ್ಯವಹಾರ ಮಾಡಲು ಅವಕಾಶ ನೀಡುವಂತಿಲ್ಲ.
ಊರಿನ ಮತ್ತು ದೇವಸ್ಥಾನಕ್ಕೆ ಸಂಬಂಧಿಸಿದ ಭಕ್ತ ವ್ಯಾಪಾರಿಗಳಿದ್ದರೂ ಏಲಂ ಪ್ರಕ್ರಿಯೆಯನ್ನು ನಡೆಸದೆ ಕೆಲವು ವ್ಯಾಪಾರಸ್ಥರಿಗೆ ಒಳಗಿಂದೊಳಗೆ ಅನುಮತಿ ನೀಡಿದ್ದಾರೆ ಎಂಬ ವಿಚಾರ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವುದು ತಿಳಿದಿರುತ್ತದೆ. ಆದ್ದರಿಂದ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಯಾವುದೇ ಕಾರಣಕ್ಕೂ ವ್ಯಾಪಾರ ವ್ಯವಹಾರ ನಡೆಸಲು ಅವಕಾಶ ನೀಡಬಾರದು.
ಅದೇ ರೀತಿ ಕೆಲ ಹಿಂದೂಗಳು ಏಲಂನಲ್ಲಿ ಜಾಗವನ್ನು ಪಡೆದುಕೊಂಡು ಅನ್ಯ ಮತೀಯರಿಗೆ ಅಥವಾ ದೂರದ ಜಿಲ್ಲೆಯವರಿಗೆ ಹೆಚ್ಚಿನ ಹಣಕ್ಕೆ ನೀಡಿದರೆ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಮತ್ತು ಏಲಂ ಪ್ರಕ್ರಿಯೆ ನಡೆಸದೆ ಯಾವುದೇ ಕಾರಣಕ್ಕೂ ಯಾವುದೇ ವ್ಯಾಪಾರಿಗಳಿಗೆ ಅಂಗಡಿ ಮುಂಗಟ್ಟುಗಳು ಮತ್ತು ಜಾಯಿಂಟ್ ವಿಲ್ ಗಳನ್ನು ನೀಡಬಾರದು. ಆದಷ್ಟು ಊರಿನ ಅಥವಾ ದೇವಸ್ಥಾನದ ಭಕ್ತ ವ್ಯಾಪಾರಿಗಳಿಗೆ ಅವಕಾಶ ನೀಡಲು ಸೂಕ್ತ ವ್ಯವಸ್ಥೆಯನ್ನು ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.