

ಮಳೆಯ ಪರಿಣಾಮವಾಗಿ ಮನೆಯೊಂದು ಕುಸಿದು ಮಹಿಳೆ ಹಾಗೂ 24 ದಿನದ ಹಸುಗೂಸು ಮೃತಪಟ್ಟ ದಾರುಣ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಜೀರಾಳ ಗ್ರಾಮದಲ್ಲಿ ನಡೆದಿದೆ. ಸೋಮವಾರ ರಾತ್ರಿ ನಡೆದ ದುರಂತದಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿಗಳನ್ನು ಫಕೀರಮ್ಮ ಭೋವಿ (55) ಎಂದು ಗುರುತಿಸಲಾಗಿದೆ.
24 ದಿನದ ಹಸುಗೂಸು ಹೆಸರು ಇಡುವ ಮೊದಲೇ ಪ್ರಾಣ ಕಳೆದುಕೊಂಡಿದೆ. ಬಾಣಂತಿ ತಾಯಿ ಕನಕಮ್ಮಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕನಕಮ್ಮ ಅವರು ಹೆರಿಗೆಗಾಗಿ ತವರು ಮನೆಗೆ ಬಂದಿದ್ದರು. ಹೆರಿಗೆಯಾಗಿ 24 ದಿನಗಳಷ್ಟೇ ಕಳೆದಿತ್ತು. ತಾಯಿ ಫಕೀರಮ್ಮ ಅವರು ಮಗಳ ಆರೈಕೆ ಮಾಡುತ್ತಿದ್ದರು.
ಇತ್ತೀಚೆಗೆ ಈ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಳೆಯಿಂದಾಗಿ ಮನೆಯ ಗೋಡೆ ಜರ್ಜರಿತವಾಗಿತ್ತು. ಸೋಮವಾರ ರಾತ್ರಿ ತಾಯಿ, ಮಗಳು ಮತ್ತು ಮೊಮ್ಮಗಳು ಮಲಗಿದ್ದ ವೇಳೆ ಗೋಡೆ ಉರುಳಿಬಿದ್ದಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿನ ಅಜ್ಜಿ ಮತ್ತು ಮೊಮ್ಮಗು ಮೃತಪಟ್ಟಿದೆ. ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದಾಗಿದ್ದು, ಪ್ರಕರಣ ದಾಖಲಾಗಿದೆ.