ಮೂಡುಬಿದಿರೆ: ದ್ವಿಚಕ್ರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಬೆಟ್ಟುವಿನಲ್ಲಿ ನಡೆದಿದೆ.
ಮಹಾವೀರ ಕಾಲೇಜು ಬಳಿಯ ನಿವಾಸಿ ಪ್ರದೀಪ್ ಶೆಟ್ಟಿ (38) ಮೃತ ದುರ್ದೈವಿ. ಮೂರು ದಿನಗಳ ಹಿಂದೆ ವಿದೇಶದಿಂದ ಊರಿಗೆ ಬಂದಿದ್ದ ಯುವಕ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಕಾರಿಗೆ ಡಿಕ್ಕಿ ಹೊಡೆದಿದೆ.
ಪ್ರದೀಪ್ ಅವರು ತನ್ನ ಮನೆಯಲ್ಲಿ ರಾತ್ರಿ ಊಟ ಮುಗಿಸಿ ತನ್ನ ಜುಪಿಟರ್ ಬೈಕ್ ನಲ್ಲಿ ಮೂಡುಬಿದಿರೆಯಿಂದ ಗಂಟಲ್ ಕಟ್ಟೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬೆಳ್ತಂಗಡಿಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕಾರು ಕಲ್ಲಬೆಟ್ಟು ಬಳಿ ಢಿಕ್ಕಿ ಹೊಡೆದಿದೆ. ಆಗ ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟ ಪ್ರದೀಪ್ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು ಸ್ಥಳದಲ್ಲೇ ಆಸು ನೀಗಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮೃತ ಪ್ರದೀಪ್ ಅವರು ಇಂದು ತನ್ನ 39 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವವರಿದ್ದರು. ಆದರೆ ವಿಧಿಯ ಆಟಕ್ಕೆ ಯುವಕ ಬಲಿಯಾಗಿದ್ದಾನೆ.