ವೈದ್ಯೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗಳ ಸಾವಿಗೆ ಅಳಿಯನೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ. ಡಾ. ಗೀತಾ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನತದೃಷ್ಟೆ.
ಗಂಡ-ಹೆಂಡತಿ ಇಬ್ಬರು ಸರ್ಕಾರಿ ವೈದ್ಯರಾಗಿದ್ದು ವ್ಯಾಸಂಗ ಮಾಡುತ್ತಿದ್ದಾಗಲೇ ಇಬ್ಬರ ನಡುವೆ ಸ್ನೇಹಿತವಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿ ಬಳಿಕ ವಿವಾಹವಾಗಿದ್ದರು. ಇವರು ದಾಂಪತ್ಯಕ್ಕೆ ಜೀವನಕ್ಕೆ ಎರಡು ಮುದ್ದಾದ ಮಕ್ಕಳಿದ್ದಾರೆ.
ಡಾ. ಗೀತಾ ಗದಗದ (ಆರ್ಬಿಎಸ್ಕೆ) ರಾಷ್ಟ್ರೀಯ ಬಾಲ ಸಂಸ್ಥೆ ಕಾರ್ಯಕ್ರಮದ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪತಿ ಡಾ. ಕುಶಾಲ್ ಕೋರಿ ಬಿಎಎಂಎಸ್ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಆಯುಷ್ಯ ಇಲಾಖೆ ವೈದ್ಯಾಧಿಕಾರಿ ಆಗಿ ಸೇವೆ ಮಾಡುತ್ತಿದ್ದರು.
ನಿತ್ಯವೂ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿದ್ದು, ನಿನ್ನೆಯೂ ಜಗಳಾವಾಡಿದ್ದಾರೆ ಎನ್ನಲಾಗಿದೆ. ಇಬ್ಬರ ನಡುವಿನ ವಿರಸ ಗೀತಾ ಸಾವಿನಲ್ಲಿ ಅಂತ್ಯವಾಗಿದೆ. ಸಾವಿನ ಸುದ್ದಿ ತಿಳಿದು ಗೀತಾ ಕುಟುಂಬಸ್ಥರು ಹುಲಕೋಟಿಗೆ ದೌಡಾಯಿಸಿದ್ದು, ಮಗಳ ಸಾವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗಳ ಸಾವಿಗೆ ಪತಿ ಡಾ.ಕುಶಾಲನೇ ಕಾರಣ ಅಂತ ಆರೋಪಿಸಿದ್ದಾರೆ.
ಮಗಳ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪುಷ್ಠಿ ಎಂಬಂತೆ ಗೋಡೆ ಮೇಲಿನ ಬರಹ ಸಾಕಷ್ಟು ಅನುಮಾನ ಹುಟ್ಟಿಸಿದೆ. ಗೋಡೆಯ ಮೇಲೆ ಸಾವಿನ ಬಗ್ಗೆ ಬರಹವಿದ್ದು, ಅದನ್ನು ಬರೆದವರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ.
ಗದಗ ಗ್ರಾಮೀಣ ಪೊಲೀಸರು ಸಾವಿನ ಬಗ್ಗೆ ತನಿಖೆ ನಡೆಸಿದ್ದಾರೆ. ವೈದ್ಯೆಯ ಸಾವು ಆತ್ಮಹತ್ಯೆಯೋ.. ಕೊಲೆಯೋ ಅಂತ ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ. ಗಂಡ-ಹೆಂಡತಿಯ ಜಗಳದಲ್ಲಿ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.