ಸೌದಿ ಅರೇಬಿಯಾದಿಂದ ಕರ್ನಾಟಕದ ಮಂಗಳೂರಿಗೆ ಕಚ್ಚಾ ತೈಲವನ್ನು ಹೊತ್ತುಕೊಂಡು ಬರುತ್ತಿದ್ದ ಹಡಗಿಗೆ ಗುಜರಾತ್ ಬಳಿಯ ಸಮುದ್ರ ಮಧ್ಯೆ ಡ್ರೋಣ್ ದಾಳಿಯಾಗಿದೆ. ಡ್ರೋಣ್ ದಾಳಿಯಿಂದ ಬೆಂಕಿ ಹತ್ತಿಕೊಂಡಿದ್ದು, ಹಡಗಿನಲ್ಲಿ ತಾಂತ್ರಿಕ ತೊಂದರೆ ಉಂಟಾಗಿದೆ. ಹಡಗನ್ನು ಸಮುದ್ರ ಮಧ್ಯದಲ್ಲೇ ನಿಲ್ಲಿಸಲಾಗಿದ್ದು ಅದರಲ್ಲಿ 20 ಮಂದಿ ಭಾರತೀಯ ಸಿಬ್ಬಂದಿಯಿದ್ದಾರೆ ಎಂದು ನೌಕಾ ಸೇನೆಯ ಮೂಲಗಳು ತಿಳಿಸಿವೆ.
ಗುಜರಾತಿನ ಪೋರ್ ಬಂದರಿನಿಂದ 217 ನಾಟಿಕಲ್ ಮೈಲು ದೂರದ ಸಮುದ್ರ ಮಧ್ಯದಲ್ಲಿ ಘಟನೆ ನಡೆದಿದೆ. ಇಸ್ರೇಲ್ ದೇಶಕ್ಕೆ ಸೇರಿದ ಎಂವಿ ಚೆಮ್ ಪುಟೋ ಹೆಸರಿನ ಕಾರ್ಗೋ ಹಡಗಿನಲ್ಲಿ ಸೌದಿ ಅರೇಬಿಯಾದಿಂದ ಮಂಗಳೂರಿನ ಬಂದರಿಗೆ ಕಚ್ಚಾ ತೈಲವನ್ನು ಹೊತ್ತುಕೊಂಡು ಬರುತ್ತಿದ್ದಾಗ ಡ್ರೋಣ್ ದಾಳಿಯಾಗಿದೆ. ದಾಳಿಯಿಂದ ಹಡಗಿನಲ್ಲಿ ಬೆಂಕಿ ಹತ್ತಿಕೊಂಡಿದ್ದು, ಅದನ್ನು ಬಳಿಕ ನಂದಿಸಲಾಗಿದೆ. ಆದರೆ ಡ್ರೋಣ್ ದಾಳಿಯಿಂದಾಗಿ ಹಡಗಿನಲ್ಲಿ ತಾಂತ್ರಿಕ ತೊಂದರೆ ಉಂಟಾಗಿದ್ದು ಸಮುದ್ರ ಮಧ್ಯದಲ್ಲೇ ಹಡಗನ್ನು ನಿಲುಗಡೆ ಮಾಡಲಾಗಿದೆ .
ಭಾರತದ ಸಮುದ್ರ ಆರ್ಥಿಕ ವಲಯದ ಗಡಿಯಲ್ಲೇ ಪೆಟ್ರೋಲಿಂಗ್ ಮಾಡುತ್ತಿದ್ದ ಕೋಸ್ಟ್ ಗಾರ್ಡ್ ಪಡೆಯ ಐಸಿಜಿಎಸ್ ವಿಕ್ರಮ್ ನೌಕೆಯನ್ನು ಕೂಡಲೇ ಸ್ಥಳಕ್ಕೆ ಕಳಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದೆ. ಇದಲ್ಲದೆ, ಕೋಸ್ಟ್ ಗಾರ್ಡ್ ಮತ್ತು ನೌಕಾ ಸೇನೆಯ ಹಡಗುಗಳನ್ನು ಕರಾವಳಿಯಲ್ಲಿ ಅಲರ್ಟ್ ಆಗಿರಲು ಸೂಚನೆ ನೀಡಲಾಗಿದೆ. ಹಡಗಿನಲ್ಲಿದ್ದ ಭಾರತೀಯ ಸಿಬಂದಿ ಸೇಫ್ ಆಗಿದ್ದಾರೆಂದು ಭಾರತೀಯ ನೌಕಾ ಪಡೆಯ ವಕ್ತಾರರು ಟೀಟ್ ಮಾಡಿದ್ದಾರೆ. ಆದರೆ ಈ ಕುರಿತು ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಹಡಗಿನಲ್ಲಿ ಬೆಂಕಿ ಹತ್ತಿಕೊಂಡು ನೀರು ಒಳನುಗ್ಗಿದೆ, ಇದರಿಂದ ತಾಂತ್ರಿಕ ತೊಂದರೆ ಆಗಿದೆ ಎನ್ನುವ ವರದಿಗಳನ್ನು ರಾಷ್ಟ್ರೀಯ ಮಾಧ್ಯಮಗಳು ಹೇಳಿವೆ.
ಉಗ್ರರ ದಾಳಿ ಆಗಿರುವ ಶಂಕೆ
ಕಳೆದ ವಾರ ಸುಯೆಜ್ ಸಮುದ್ರದಲ್ಲಿ ಮಂಗಳೂರಿನಿಂದ ಜೆಟ್ ಇಂಧನ ಸಾಗಿಸುತ್ತಿದ್ದ ತೈಲ ಹಡಗಿನ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಿದ್ದರು. ಇದರ ನಡುವೆ, ಮೊನ್ನೆ ಗುರುವಾರ ಲಕ್ಷದ್ವೀಪ ಸಮುದ್ರದ ಬಳಿ ಮಾಲ್ಟಾ ದ್ವೀಪ ಸಮೂಹಕ್ಕೆ ಸೇರಿದ ಹಡಗಿನ ಮೇಲೆ ದಾಳಿ ನಡೆದಿತ್ತು. ಅದರಿಂದ ರಕ್ಷಣೆಗೆ ಕರೆ ಬಂದ ಹಿನ್ನೆಲೆಯಲ್ಲಿ ಭಾರತದ ನೌಕಾಪಡೆಯು ಸ್ಪಂದಿಸಿದ್ದಲ್ಲದೆ, ತನ್ನ ಏರ್ ಕ್ರಾಫ್ಟ್ ಮತ್ತು ಯುದ್ಧ ಹಡಗನ್ನು ಕಳಿಸಿಕೊಟ್ಟಿತ್ತು. ಅದರಲ್ಲಿ 18 ಸಿಬಂದಿಯಿದ್ದು, ಆರು ಮಂದಿಯಿದ್ದ ಬಂಡುಕೋರರು ಮಾಲ್ಟಾ ಹಡಗನ್ನು ತಮ್ಮ ವಶಕ್ಕೆ ಪಡೆದಿದ್ದರು. ಸೋಮಾಲಿಯದತ್ತ ಚಲಿಸುತ್ತಿದ್ದ ಹಡಗಿಗೆ ಭಾರತೀಯ ನೌಕಾಪಡೆ ರಕ್ಷಣೆ ಕೊಟ್ಟಿತ್ತು. ಇದಕ್ಕೆ ಪ್ರತಿಯಾಗಿ ಈಗ ಡ್ರೋಣ್ ದಾಳಿ ಆಗಿದೆಯೇ ಎನ್ನುವುದು ಗೊತ್ತಾಗಿಲ್ಲ, ಅದಾಗಿ ಎರಡು ದಿನಗಳ ಬಳಿಕ ಶನಿವಾರ ಭಾರತದತ್ತ ಬರುತ್ತಿದ್ದ ಹಡಗಿನ ಮೇಲೆ ಡ್ರೋಣ್ ದಾಳಿ ನಡೆದಿದ್ದು, ಇದನ್ನು ಯಾರು ಮಾಡಿದ್ದಾರೆಂದು ಹೊಣೆ ಹೊತ್ತುಕೊಂಡಿಲ್ಲ. ಇಸ್ರೇಲ್ ಮೂಲದ ಹಡಗು ಅನ್ನುವ ಕಾರಣಕ್ಕೆ ಉಗ್ರ ಸಂಘಟನೆಗಳು ಈ ಕೆಲಸ ಮಾಡಿವೆಯೇ ಎನ್ನುವ ಶಂಕೆಯೂ ಇದೆ.