ಮಂಗಳೂರು: ತುಳುನಾಡಿನ ಸಂಸ್ಕೃತಿ ಹಾಗೂ ಆಚರಣೆಯ ಭಾಗವಾಗಿರುವ ದೈವಾರಾಧನೆಯ ಬಗ್ಗೆ ಅಶ್ಲೀಲವಾಗಿ ಪೋಸ್ಟ್ನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ವ್ಯಕ್ತಿಯನ್ನು ಬರೋಬ್ಬರಿ 7 ತಿಂಗಳುಗಳ ಬಳಿಕ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬೆಂಗಳೂರಿನ ಶಿವರಾಜ್ ಹೆಚ್.ಕೆ(37) ಎಂದು ಗುರುತಿಸಲಾಗಿದೆ. ನಕಲಿ ಟ್ವಿಟರ್ ಖಾತೆಯ ಮೂಲಕ ಮಹಿಳೆಯರ ಜೊತೆ ದೈವವು ಇರುವಂತಹ ಅಶ್ಲೀಲ ಪೋಸ್ಟ್ ಶೇರ್ ಮಾಡಿದ್ದ ಬೆಂಗಳೂರಿನ ಅಮೃತಹಳ್ಳಿ ನಿವಾಸಿ ಶಿವರಾಜ್ ಎಂಬಾತ ಈ ಮೂಲಕ ಕನ್ನಡಿಗರು ಹಾಗೂ ತುಳುನಾಡಿನ ಜನತೆಯ ನಡುವೆ ಸಂಘರ್ಷ ನಡೆಸುವ ಹುನ್ನಾರ ನಡೆಸಿದ್ದ. ಈತನ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ತುಳುನಾಡು ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಸಂಚಾಲಕ ಭರತ್ ಬಲ್ಲಾಲ್ ಎಂಬವರು ದೂರನ್ನು ದಾಖಲಿಸಿದ್ದರು.
ಈ ಸಂಬಂಧ ಮಂಗಳೂರು ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೊಂದು ನಕಲಿ ಟ್ವಿಟರ್ ಖಾತೆಯಾದ್ದರಿಂದ ಇದರ ಮೂಲ ಹುಡುಕಿ ಹೊರಟ ಪೊಲೀಸರು ಘಟನೆ ನಡೆದು ಏಳು ತಿಂಗಳುಗಳ ಬಳಿಕ ಆರೋಪಿ ಶಿವರಾಜ್ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಆರೋಪಿಯನ್ನು ಮಂಗಳೂರು 7ನೇ ಜೆಎಂಎಫ್ಸಿ ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿದೆ.