ಬಂಟ್ವಾಳ : ಮೂವರ ತಂಡವೊಂದು ಮನೆಗೆ ಅಕ್ರಮ ಪ್ರವೇಶಿಸಿ ಮನೆಗೆ ಮಂದಿಗೆ ಹಲ್ಲೆ ನಡೆಸಿ ಬೈದು ಜೀವಬೆದರಿಕೆ ಒಡ್ಡಿದ ಘಟನೆ ಬಿ ಸಿ ರೋಡು ಸಮೀಪದ ಕೈಕಂಬ-ಮದ್ದ ಎಂಬಲ್ಲಿ ಶನಿವಾರ ನಡೆದಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈಕಂಬ ಪರ್ಲಿಯಾ ನರ್ಸಿಂಗ್ ಹೋಂ ಹತ್ತಿರದ ಆಶಾಷ್ ಮ್ಯಾನ್ಷನ್ ನಿವಾಸಿ ಮಹಮ್ಮದ್ ಶಂಶೀರ್ (29) ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಾದ ಬಿ ಸಿ ರೋಡು ಸಮೀಪದ ತಲಪಾಡಿ ನಿವಾಸಿಗಳಾದ ಝಕಾರಿಯಾ, ಅಬೂಬಕ್ಕರ್ ಸಂಹಾನ್ ಎ ಎಚ್ ಹಾಗೂ ಹೈದರ್ ಆಲಿ ಎ ಎಚ್ ಎಂಬವರು ಶನಿವಾರ ಬೆಳಿಗ್ಗೆ ಮನೆಗೆ ಬಂದು, ಬಾಗಿಲನ್ನು ಜೋರಾಗಿ ಬಡಿದು, ಅವ್ಯಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ.
ಬಳಿಕ ಅದೇ ದಿನ ರಾತ್ರಿ ಆರೋಪಿ ಝಕಾರಿಯಾ ಅವರು ಮತ್ತೆ ಶಂಶೀರ್ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ತಂದೆಗೆ ಹಾಗೂ ಶಂಶೀರ್ ಅವರಿಗೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ತಡೆಯಲು ಬಂದ ಶಂಶೀರ್ ಅವರ ತಾಯಿಯವರನ್ನು ದೂಡಿ ಹಾಕಿದ್ದು, ಈ ವೇಳೆ ಶಂಶೀರ್ ಜೀವ ರಕ್ಷಣೆಗಾಗಿ ಅಡುಗೆ ಕೋಣೆಯಿಂದ ಮಸಾಲೆ ಹುಡಿ ತಂದು ಝಕಾರಿಯಾನ ಮುಖಕ್ಕೆ ಎಸೆದಿರುತ್ತಾರೆ.
ಹಲ್ಲೆಯಿಂದ ಗಾಯಗೊಂಡ ಶಂಶೀರ್ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2024 0 323, 324, 504, 506, 448, 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.