ಕಸದ ರಾಶಿ ಮಧ್ಯೆ ಕೈ ಕಾಲುಗಳು, ರುಂಡವಿಲ್ಲದ ನಗ್ನ ಮೃತದೇಹ ಪತ್ತೆಯಾದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿ 54 ವರ್ಷದ ಗೀತಮ್ಮ ಬರ್ಬರವಾಗಿ ಕೊಲೆಯಾದ ಒಂಟಿ ಮಹಿಳೆ. ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗೀತಮ್ಮಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರಿಗೆ ಮದುವೆ ಮಾಡಿಕೊಟ್ಟು, ಪತಿ ಸಾವಿನ ಬಳಿಕ ಒಬ್ಬಂಟಿಯಾಗಿದ್ದಳು.
ಗೀತಮ್ಮ ಒಂದು ಮನೆಯಲ್ಲಿ ವಾಸವಿದ್ರೆ, ಉಳಿದ ಎರಡು ಮನೆಗಳನ್ನು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಯುವಕರಿಗೆ ಬಾಡಿಗೆಗೆ ಕೊಟ್ಟಿದ್ದಾಳೆ. ಹೇಗೋ ಜೀವನ ಸಾಗಿಸುತ್ತಿದ್ದ ಒಂಟಿ ಮಹಿಳೆ ಗೀತಮ್ಮ ಇದ್ದಕ್ಕಿದ್ದಂತೆ ಮೂರ್ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದು, ಜೂ.1 ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೆಟ್ಟ ವಾಸನೆ ಬರುತ್ತಿದ್ದರಿಂದ ಅಕ್ಕಪಕ್ಕದ ಮನೆಯವರು ಯಾಕೆ ಈ ಪರಿ ಕೊಳೆತ ವಾಸನೆ ಬರಿತ್ತಿದೆಯೆಂದು ಇಣುಕಿ ನೋಡಿದಾಗ ಕಾಲು, ಕೈ ಕಟ್ ಮಾಡಿರುವ ರುಂಡವಿಲ್ಲದ ದೇಹ ಪತ್ತೆಯಾಗಿದ್ದು, ಗೀತಮ್ಮಳನ್ನ ಬರ್ಬರವಾಗಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಮೃತ ಗೀತಮ್ಮ ಬಿಹಾರ ಮೂಲದ ಯುವಕರಿಗೆ ಮನೆ ಬಾಡಿಗೆಗೆ ನೀಡಿದ್ದಳು, ನಾಲ್ಕು ದಿನಗಳ ಹಿಂದೆ ವೃದ್ಧೆ ಕಾಣೆಯಾದ ದಿನದಿಂದ ಬಾಡಿಗೆ ಮನೆಯಲ್ಲಿದ್ದ ಬಿಹಾರ ಯುವಕರು ಕೂಡ ಕಾಣಿಸುತ್ತಿಲ್ಲ. ಅಲ್ಲದೆ ಅವರ ಮೊಬೈಲ್ ಕೂಡ ಸ್ವೀಚ್ ಆಫ್ ಆಗಿತ್ತು. ಹೀಗಾಗಿ ವೃದ್ಧೆಯ ಮನೆ ಬಾಡಿಗೆಗಿದ್ದ ಯುವಕರೇ ಕೊಲೆ ಮಾಡಿರುವ ಬಲವಾದ ಶಂಕೆ ವ್ಯಕ್ತವಾಗಿದೆ.