ಬಂಟ್ವಾಳ : ಫೇಸ್ ಬುಕ್ ನಲ್ಲಿ ಶೇರ್ ಮಾರ್ಕೆಟ್ ಹೂಡಿಕೆ ಜಾಹೀರಾತು ನೋಡಿ ಬಂಟ್ವಾಳದ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ನಿವಾಸಿ ವಿಷ್ಣುಮೂರ್ತಿ ಎಂಬವರೇ ಹಣ ಕಳೆದುಕೊಂಡು ಮೋಸ ಹೋದ ವ್ಯಕ್ತಿ.
ಕಳೆದ ನವೆಂಬರ್ ತಿಂಗಳ 29ರಂದು ವಿಷ್ಣುಮೂರ್ತಿ ಅವರಿಗೆ ಫೇಸ್ ಬುಕ್ ನಲ್ಲಿ ಶೇರ್ ಮಾರ್ಕೆಟ್ ಹೂಡಿಕೆ ಬಗ್ಗೆ ಜಾಹೀರಾತು ನೋಡಿ ಅದರಲ್ಲಿದ್ದ ಲಿಂಕ್ ಮೂಲಕ ವಾಟ್ಸಪ್ ಗ್ರೂಪಿಗೆ ಸೇರ್ಪಡೆಯಾಗಿರುತ್ತಾರೆ.
ಸದ್ರಿ ಗ್ರೂಪಿನಲ್ಲಿ ಸೂಚಿಸಿದಂತೆ, ಆಪ್ ಡೌನ್ ಲೋಡ್ ಮಾಡಿಕೊಂಡು ಅದರಲ್ಲಿ ತನ್ನ ಪತ್ನಿಯ ಹೆಸರಿನಲ್ಲಿ ಟ್ರೇಡಿಂಗ್ ಖಾತೆ ತೆರೆದು, ಅದಕ್ಕೆ ವಿಷ್ಣುಮೂರ್ತಿ ಹಾಗೂ ಅವರ ಪತ್ನಿಯ ಆಧಾರ್ ಕಾರ್ಡ್, ಮೊಬೈಲ್ ನಂಬ್ರ, ಬ್ಯಾಂಕ್ ವಿವರವನ್ನು ನೀಡಿರುತ್ತಾರೆ. ಬಳಿಕ ಅಪರಿಚಿತ ವ್ಯಕ್ತಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 11 ಲಕ್ಷದ 14 ಸಾವಿರದ 400 ರೂಪಾಯಿ ಹಣವನ್ನು ಪಾವತಿಸಿದ್ದು, ಅದರಲ್ಲಿ 55 ಸಾವಿರ ರೂಪಾಯಿ ಹಣವನ್ನು ಅಪರಿಚಿತ ವಂಚಕರು ವಿಷ್ಣುಮೂರ್ತಿ ಅವರ ಖಾತೆಗೆ ಮರು ಜಮೆ ಮಾಡಿರುತ್ತಾರೆ. ಬಾಕಿ ಹಣವನ್ನು ಹಿಂತಿರುಗಿಸದೆ ವಂಚಿಸಿರುತ್ತಾರೆ ಎಂದು ನೀಡಿದ ದೂರಿನಂತೆ ಸಿ ಇ ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2024 ಕಲಂ 66(ಸಿ), 66(ಡಿ), ಐಟಿ ಆಕ್ಟ್ 420 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.