ಹೆಂಡತಿ ಹಾಗೂ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿಗೆ ಗುಂಡಿಕ್ಕಿ ಪೊಲೀಸ್ ಪೇದೆಯೊಬ್ಬರು ಸಾವಿಗೆ ಶರಣಾದ ದಾರುಣ ಘಟನೆ ಆಂಧ್ರಪ್ರದೇಶದ ಕಡಪಾದಲ್ಲಿ ನಡೆದಿದೆ. ಮೊದಲಿಗೆ ಹೆಂಡತಿ ಹಾಗೂ ಮಕ್ಕಳಿಗೆ ಗುಂಡು ಹಾರಿಸಿದ ಪೊಲೀಸ್ ಪೇದೆ ಅವರ ಸಾವಿನ ಬಳಿಕ ತನಗೂ ಗುಂಡು ಹಾರಿಸಿಕೊಂಡು ಸಾವಿನ ದಾರಿ ಹಿಡಿದಿದ್ದಾರೆ. ಹೆಂಡತಿ ಮಕ್ಕಳನ್ನು ಕೊಂದು ತಾನು ಸಾವಿಗೆ ಶರಣಾದ ಪೇದೆಯನ್ನು 55 ವರ್ಷದ ವೆಂಕಟೇಶ್ವರಲು ಎಂದು ಗುರುತಿಸಲಾಗಿದೆ.
ಇವರು ಕಡಪಾ ನಗರದ ಎರಡು ನಗರದ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು. ಮೃತ ಪೇದೆಯ ಮನೆಯಲ್ಲಿ ಡೆತ್ನೋಟ್ ಕೂಡ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ. ಬುಧವಾರ ರಾತ್ರಿ 11ಗಂಟೆಯವರೆಗೆ ವೆಂಕಟೇಶ್ವರಲು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದ್ದು, ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ಠಾಣೆಯಲ್ಲಿದ್ದ ಪಿಸ್ತೂಲ್ ಹಾಗೂ ಗುಂಡುಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಕಡಪಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಎಂ.ಎಡಿ ಶರೀಫ್ ಹೇಳಿದ್ದಾರೆ.
ವೆಂಕಟೇಶ್ವರಲು ಅವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಹಣ ಕಳೆದುಕೊಂಡಿದ್ದರು, ಇದರ ಜೊತೆಗೆ ಕೌಟುಂಬಿಕ ವಿಚಾರಗಳು ಕೂಡ ಅವರನ್ನು ಬಾಧಿಸುತ್ತಿತ್ತು. ಇದರಿಂದ ನೊಂದು ಸಾವಿಗೆ ಶರಣಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.