ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಸುಪಾಸಿನಲ್ಲಿರುವ ಎಲ್ಲಾ ಸರಕಾರಿ ಜಮೀನನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕು: ಜಿಲ್ಲಾಧಿಕಾರಿಗೆ ಪ.ಪಂ ಸದಸ್ಯ ಅರುಣ್ ವಿಟ್ಲ ಮನವಿ



ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಬಳಿಯಿರುವ ಸರ್ವೆ ನಂಬ್ರ 477/4B2A ರಲ್ಲಿರುವ 0.30 ಎಕ್ರೆ ಸರಕಾರಿ ಜಮೀನನ್ನು ರಾಜಕೀಯ ಪಕ್ಷವೊಂದು ಸ್ವಾಧೀಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಗ್ಗೆ ವರದಿ ಯಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯತ್ ಸದಸ್ಯ ಅರುಣ್ ಎಂ ವಿಟ್ಲ ಜಿಲ್ಲಾಧಿಕಾರಿಯವರಿಗೆ ಅಕ್ಷೇಪಣೆ ಪತ್ರ ಸಲ್ಲಿಸಿದ್ದಾರೆ.
’ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಬಳಿಯಿರುವ ಸರ್ವೆ ನಂಬ್ರ 477/4B2A ರಲ್ಲಿರುವ 0.30 ಎಕ್ರೆ ಸರಕಾರಿ ಜಮೀನನ್ನು ಒಂದು ರಾಜಕೀಯ ಪಕ್ಷದವರು ತಮ್ಮ ಪಕ್ಷದ ಕಛೇರಿ ನಿರ್ಮಾಣ ಮಾಡಲೆಂದು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿಚಾರ ತಿಳಿದು ಬಂದಿರುತ್ತದೆ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರವು ಮುಂದೊಂದು ದಿನ ಉನ್ನತೀಕರಣಗೊಂಡು ತಾಲೂಕು ಆಸ್ಪತ್ರೆ ಆಗುವ ಸಂದರ್ಭದಲ್ಲಿ ಸದ್ರಿ ಆಸ್ಪತ್ರೆಗೆ ಇನ್ನಷ್ಟು ಸ್ಥಳದ ಅವಶ್ಯಕತೆ ಇರುವುದರಿಂದ, ಇರುವ ಜಾಗವನ್ನು ಹಾಗೆಯೇ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಇದ್ದ ಸ್ಥಳವನ್ನು ಬೇರೆ ಸಂಘ ಸಂಸ್ಥೆಗಳಿಗೆ ರಾಜಕೀಯ ಪಕ್ಷದವರಿಗೆ ಬಿಟ್ಟುಕೊಟ್ಟರೆ ಮುಂದೆ ನಿಶ್ಚಿತವಾಗಿಯೂ ಪಶ್ಚಾತ್ತಾಪ ಪಡಬೇಕಾಗುತ್ತದೆ. ಆದ ಕಾರಣ ಸುತ್ತ ಮುತ್ತ ಇರುವ ಸರಕಾರಿ ಸ್ಥಳವನ್ನು ಹೇಗಿದೆಯೋ ಹಾಗೆಯೇ ಉಳಿಸಿಕೊಳ್ಳಬೇಕಾದದ್ದು ಸರಕಾರದ ಹಾಗೂ ಜನಪ್ರತಿನಿಧಿಗಳ ಕರ್ತವ್ಯವಾಗಿರುತ್ತದೆ. ಆದುದರಿಂದ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಸುಪಾಸಿನಲ್ಲಿರುವ ಎಲ್ಲಾ ಸರಕಾರಿ ಜಮೀನನ್ನು ಯಥಾಸ್ಥಿತಿ ಉಳಿಸಿಕೊಂಡು ಮುಂದಿನ ಉದ್ದೇಶಕ್ಕೆ ಕಾಯ್ದಿರಿಸುವಂತೆ ಅಕ್ಷೇಪಣೆ ಪತ್ರದಲ್ಲಿ ತಿಳಿಸಿದ್ದಾರೆ.








