ಕೆರೆಯಲ್ಲಿ ಈಜಲು ಹೋದ ಕಾಲೇಜು ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಸೈಂಟ್ ಜೋಸೆಫ್ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ ಪದವಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ ಹರ್ಷ (19) ಮೃತ ದುರ್ದೈವಿ.
ಚಿಕ್ಕಮಗಳೂರು ಜಯನಗರದ ನಿವಾಸಿ ಕೃಷ್ಣಪ್ಪ ಎಂಬುವವರ ಪುತ್ರ. ಕೃಷ್ಣಪ್ಪ ಅವರು ನಗರದ ಖಾಸಗಿ ಬ್ಯಾಂಕ್ ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ಬೆಳಿಗ್ಗೆ ಎಂದಿನಂತೆ ಕಾಲೇಜಿಗೆ ಎಂದು ಮನೆಯಿಂದ ಹೋಗಿದ್ದಾನೆ. ಆದರೆ ತರಗತಿಗೆ ಹೋಗದೇ ಸ್ನೇಹಿತನೊಂದಿಗೆ ನಲ್ಲೂರು ಕೆರೆಯಲ್ಲಿ ಈಜಲು ತೆರಳಿದ್ದಾನೆ. ನೀರಿಗಿಳಿದ ಹರ್ಷ ಈಜಲು ಆಗದೇ ಕೆರೆಯಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ. ಆತನೊಂದಿಗೆ ಇದ್ದ ಸ್ನೇಹಿತ ಗಾಬರಿಗೊಂಡು ಊರಿನವರಿಗೆ ವಿಷಯ ಮುಟ್ಟಿಸಿದ್ದಾನೆ. ಕೆರೆಯ ನೀರು ತುಂಬಾ ಆಳವಾಗಿದ್ದರಿಂದ ಸ್ಥಳೀಯರು ನೀರಿಗಿಳಿಯಲು ಹಿಂದೇಟು ಹಾಕಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯ ಮುಳುಗುತಜ್ಞರ ಸಹಕಾರದಿಂದ ಕೆರೆಯಲ್ಲಿ ಮುಳುಗಿದ್ದ ಹರ್ಷನ ಮೃತದೇಹವನ್ನು ಮೇಲೆತ್ತಿದ್ದಾರೆ. ಹರ್ಷ ತನ್ನ ಪೋಷಕರಿಗೆ ಒಬ್ಬನೇ ಮಗನೆಂದು ತಿಳಿದುಬಂದಿದೆ. ಇದ್ದೊಬ್ಬ ಮಗನನ್ನು ಕಳೆದುಕೊಂಡ ಪೋಷಕರ ಮತ್ತು ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ.