


ವಿಟ್ಲ: ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಮಾರ್ಚ್ 9 ರಿಂದ ಮಾರ್ಚ್ 16 ರ ವರೆಗೆ ಶ್ರೀ ಚೀರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ಅದ್ದೂರಿಯಾಗಿ ನಡೆಯಲಿದೆ.



ಈ ಪ್ರಯುಕ್ತ ಮಾರ್ಚ್ 9 ನೇ ಆದಿತ್ಯವಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆ ಮೆರೆವಣಿಗೆ ಆಕರ್ಷಣೀಯವಾಗಿ ಸಾಗಿಬಂತು.



ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೃಷ್ಣ ಎನ್ ಉಚ್ಚಿಲರವರ ಮಾರ್ಗದರ್ಶನದಲ್ಲಿ ಸಾಗಿಬಂದ ಹಸಿರು ಹೊರೆಕಾಣಿಕೆ ಮೆರೆವಣಿಗೆಯಲ್ಲಿ, ಬೊಂಬೆ ಕುಣಿತ, ಚೆಂಡೆ, ಬ್ಯಾಂಡ್ ವಾಲಗ, ವಿವಿಧ ಕುಣಿತಾ ಭಜನಾ ತಂಡಗಳು ಮೆರವಣಿಯಲ್ಲಿ ಆಕರ್ಷಣೆಯಾಗಿ ಕಂಗೊಳಿಸಿದವು.



ವಿಟ್ಲದಿಂದ ಉಕ್ಕುಡದವರೆಗೆ ವಾಹನ ಜಾಥದ ಮೂಲಕ ಸಾಗಿಬಂದ ಮೆರವಣಿಗೆಯು ನಂತರ ಕಾಲ್ನಡಿಗೆಯಲ್ಲಿ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರಕ್ಕೆ ಸಾಗಿಬಂತು. ಈ ಸಂದರ್ಭದಲ್ಲಿ ವಿಟ್ಲ ಪರಿಸರದ ಹಲವು ಕಡೆಗಳಿಂದ ತರಕಾರಿ, ತೆಂಗಿನಕಾಯಿ, ಅಡಿಕೆ, ಸೇರಿದಂತೆ ವಿವಿಧ ವಸ್ತುಗಳನ್ನು ಮೆರವಣಿಗೆ ಮೂಲಕ ತರಲಾಯಿತು.




ಈ ಸಂದರ್ಭದಲ್ಲಿ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೃಷ್ಣ ಎನ್ ಉಚ್ಚಿಲ ಸೇರಿದಂತೆ ಪುನರ್ ನಿರ್ಮಾಣ ಸಮಿತಿಯ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.








