ಮಂಗಳೂರು: ತನ್ನ ಅಜ್ಜ ಅಜ್ಜಿಯನ್ನು ಕೊಂದು ಚಿನ್ನಾಭರಣಗಳನ್ನು ದೋಚಿ ಕೇರಳದಿಂದ ಮಂಗಳೂರಿಗೆ ಬಂದು ಚಿನ್ನಾಭರಣ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ‘ಕೇರಳದ ತ್ರಿಶೂರ್ ಜಿಲ್ಲೆಯ ವೈಲತ್ತೂರು ಪನಾಂಗೈಲ್ ಹೌಸ್ನ ನಿವಾಸಿ ಅಹಮ್ಮದ್ ಅಕ್ಮಲ್ (27)ಎಂದು ಗುರುತಿಸಲಾಗಿದೆ.
ಆರೋಪಿ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು, ಚಿನ್ನಾಭರಣಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಬಂದರು ಠಾಣೆಯ ಪೊಲೀಸರಿಗೆ ಮಾಹಿತಿ ಬಂದಿತ್ತು. ಠಾಣಾಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. ತಾನು ಕೇರಳದ ತ್ರಿಶೂರ್ ಜಿಲ್ಲೆಯವನು ಎಂದು ಆತ ತಿಳಿಸಿದ್ದ. ಆತನ ವರ್ತನೆಯಿಂದ ಅನುಮಾನಗೊಂಡು, ಮತ್ತಷ್ಟು ವಿಚಾರಣೆ ನಡೆಸಿದಾಗ, ಅಜ್ಜ ಅಜ್ಜಿಯನ್ನು ಕೊಂದು ಚಿನ್ನಾಭರಣಗಳೊಂದಿಗೆ ಬಂದಿರುವುದನ್ನು ಆತ ಒಪ್ಪಿಕೊಂಡ’ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ ಮುತ್ತು ಪೋಣಿಸಿದ ಎರಡು ಎಳೆಯ ಚಿನ್ನದ ಸರ, ಸಣ್ಣ ಪದಕವಿರುವ ಚಿನ್ನದ ಸರ, ಮೂರು ಕಿವಿಯೋಲೆಗಳು, ಐದು ಉಂಗುರಗಳು, ಎರಡು ಬಳೆಗಳು, ಪಾಸ್ಪೋರ್ಟ್ ಹಾಗೂ ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.