ದಸರಾ ಮಹೋತ್ಸವಕ್ಕೆ ತರಲಾಗಿದ್ದ ಆನೆಯನ್ನು ವಾಪಸ್ ಲಾರಿಯಲ್ಲಿ ಕೊಂಡೊಯ್ಯುತ್ತಿದ್ದಾಗ ಅಪಘಾತ ಸಂಭವಿಸಿ ಲಾರಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ರಾಜ್ಯದ ಗಡಿಭಾಗ ತಮಿಳುನಾಡಿನ ಸಾನಮಾವು ಬಳಿ ಹೊಸೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಚಾಲಕನನ್ನು ಆರೋಗ್ಯಸ್ವಾಮಿ(45) ಎಂದು ಗುರುತಿಸಲಾಗಿದೆ. ಚಾಲಕ ಹ್ಯಾಂಡ್ ಬ್ರೇಕ್ ಹಾಕದೆ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ತೆರಳಿದ್ದಾಗ ಘಟನೆ ನಡೆದಿದೆ. ವಾಹನ ನಿಲ್ಲಿಸಿದ್ದ ಪ್ರದೇಶ ಇಳಿಜಾರಾಗಿದ್ದ ಕಾರಣ ವಾಹನ ಏಕಾಏಕಿ ಮುಂದಕ್ಕೆ ಚಲಿಸಿ ಹೋಗಲು ಆರಂಭಿಸಿದೆ. ತಡೆಯಲು ಮುಂದಾದ ಚಾಲಕನ ಮೇಲೆ ಲಾರಿ ಹರಿದಿದ್ದೇ ಸಾವಿಗೆ ಕಾರಣವಾಗಿದೆ.
ವಾಹನದಲ್ಲಿದ್ದ ಇತರ ಆರು ಮಂದಿಯಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಹೊಸೂರಿನ ಅಡ್ವ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಧಾವಿಸಿದ್ದು, ಎರಡು ಕ್ರೇನ್ಗಳ ಸಹಾಯದಿಂದ ಆನೆ ಯನ್ನ ಸುರಕ್ಷಿತವಾಗಿ ಹೊರತೆಗೆಯಲಾಯಿತು. ಲಾರಿ ಚಾಲಕ ಆರೋಗ್ಯ ಸ್ವಾಮಿ ಅವರ ಮೃತದೇಹವನ್ನು ಹೂಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇದರಿಂದ ಮಧ್ಯರಾತ್ರಿ ಸುಮಾರು 1 ಗಂಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.