

ಬ್ರಹ್ಮಾವರ: ಯುವ ದಂಪತಿ ಸಂಚರಿಸುತ್ತಿದ್ದ ಬೈಕ್ ಗೆ ಕಂಟೈನರ್ ಲಾರಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಪತ್ನಿ ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆ ನಾಗವೇಣಿ (30) ಎಂದು ತಿಳಿದು ಬಂದಿದೆ.ಸತೀಶ್(33) ಅವರು ಮೋಟಾರ್ ಸೈಕಲ್ ನಲ್ಲಿ ಪತ್ನಿ ನಾಗವೇಣಿಯನ್ನು ಕುಳ್ಳಿರಿಸಿಕೊಂಡು ಬೈಂದೂರಿನಿಂದ ಮಣಿಪಾಲಕ್ಕೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿದ್ದರು.ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದ ಶೆಟ್ಟಿಗಾರ್ ಇಂಡಸ್ಟ್ರೀಸ್ ಬಳಿ ತಲುಪುವಾಗ ಹಿಂದುಗಡೆಯಿಂದ ಒಂದು ಕಂಟೈನರ್ ಲಾರಿ ಅತಿವೇಗ ಹಾಗೂ ಅಜಾಗರೂಕತೆಯಿಂದ ತೀರಾ ಎಡಬದಿಗೆ ಬಂದು ಮೋಟಾರ್ ಸೈಕಲಿನ ಬಲ ಹ್ಯಾಂಡಲಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.ಡಿಕ್ಕಿಯ ರಭಸಕ್ಕೆ ಸವಾರ ಹಾಗೂ ಸಹಸವಾರೆ ಬೈಕ್ ಸಹಿತ ರಸ್ತೆಗೆ ಬಿದ್ದಿದ್ದಾರೆ. ಸವಾರನಿಗೆ ಕೈ ಹಾಗೂ ತೊಡೆಯಲ್ಲಿ ತರಚಿದ ಗಾಯ ಹಾಗೂ ಅವರ ಪತ್ನಿ ನಾಗವೇಣಿಯವರಿಗೆ ಮುಖ, ಎಡರಟ್ಟೆ, ತಲೆಗೆ ಗಂಭೀರ ಗಾಯಗಳಾಗಿತ್ತು.ಅಪಘಾತದ ಬಳಿಕ ಕಂಟೈನರ್ ಲಾರಿ ಚಾಲಕನು ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.ಬಳಿಕ ಇಬ್ಬರನ್ನೂ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಾಗವೇಣಿರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.








