ಬಂಟ್ವಾಳ : ಬೈಕ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಎರಡೂ ದ್ವಿಚಕ್ರ ವಾಹನಗಳ ಎರಡು ಮಂದಿ ಸವಾರರು ಹಾಗೂ ಓರ್ವ ಸಹಸವಾರ ಗಾಯಗೊಂಡ ಘಟನೆ ಸಜಿಪಮೂಡ ಗ್ರಾಮದ ಕಾರಾಜೆ ಎಂಬಲ್ಲಿ ನಡೆದಿದೆ.
ಗಾಯಾಳುಗಳನ್ನು ಬೈಕ್ ಸವಾರ ಝಮೀರ್ ಅಹ್ಮದ್ (19), ಸಹಸವಾರ ಅವರ ಸಹೋದರ ಝಹೀರ್ ಅಹ್ಮದ್ ಹಾಗೂ ಸ್ಕೂಟರ್ ಸವಾರ ಅನಂತರಾಮ ಮಯ್ಯ ಎಂದು ಹೆಸರಿಸಲಾಗಿದೆ.
ಮಂಚಿ ಗ್ರಾಮದ ನಿವಾಸಿ ಝಮೀರ್ ಅಹ್ಮದ್ ಅವರು ಬೈಕಿನಲ್ಲಿ ತನ್ನ ಸಹೋದರ ಝಹೀರ್ ಅಹ್ಮದ್ ಅವರನ್ನು ಕುಳ್ಳಿರಿಸಿಕೊಂಡು ತೆರಳುತ್ತಿದ್ದ ವೇಳೆ ಕಾರಾಜೆ ಎಂಬಲ್ಲಿ ಅನಂತರಾಮ ಮಯ್ಯ ಅವರು ಚಲಾಯಿಸಿಕೊಂಡು ಬಂದ ಸ್ಕೂಟರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಎರಡೂ ದ್ವಿಚಕ್ರ ವಾಹನಗಳ ಸವಾರರು ವಾಹನಗಳ ಸಮೇತ ರಸ್ತೆ ಬಿದ್ದು ಗಾಯಗೊಂಡಿದ್ದಾರೆ.
ಗಾಯಾಳುಗಳ ಪೈಕಿ ಝಮೀರ್ ಅಹ್ಮದ್ ಹಾಗೂ ಅನಂತರಾಮ ಮಯ್ಯ ಅವರು ಬಿ ಸಿ ರೋಡಿನ ಪರ್ಲಿಯಾ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆದರೆ, ಝಹೀರ್ ಅಹ್ಮದ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಯೇನಪೋಯ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತಕ್ಕೆ ಸ್ಕೂಟರ್ ಸವಾರ ಅನಂತರಾಮ ಮಯ್ಯ ಅವರ ದುಡುಕುತನದ ಚಾಲನೆಯೇ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.