ಮಂಗಳೂರು: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪಾಂಡೇಶ್ವರ ಸಂಚಾರ ಪಶ್ಚಿಮ ಠಾಣಾ ಎಎಸ್ಐ ನಾರಾಯಣ ನಾಯ್ಕ್ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.
ನಾರಾಯಣ ನಾಯ್ಕ್ ಅವರು ಕಳೆದ ವರ್ಷ ಅಕ್ಟೋಬರ್ 10ರಂದು ಹೈವೇ ಪ್ಯಾಟ್ರೋಲಿಂಗ್ ವೇಳೆ ಮೇರಿಹಿಲ್ ಬಳಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತ ನಾರಾಯಣ ನಾಯ್ಕ್ ಅವರು ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ಮಂಗಳೂರಿನ ಸಿಎಆರ್ ಮೈದಾನದಲ್ಲಿ ಮೃತರ ಪಾರ್ಥೀವ ಶರೀರಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಅಂತಿಮ ನಮನ ಸಲ್ಲಿಸಿದರು. ಬಳಿಕ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
ಬಂಟ್ವಾಳದ ಕೇಪು ನೀರ್ಕಜೆಯ ಈಶ್ವರ ನಾಯ್ಕ ಮತ್ತು ದೇವಕಿ ದಂಪತಿಯ ಪುತ್ರ ನಾರಾಯಣ ಅವರು 1989ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ಚೆನ್ನಪಟ್ಟಣ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು ಪಣಂಬೂರು, ಬಜಪೆ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.