ಬೆಂಗಳೂರು – ತುರ್ತು ಸಂದರ್ಭದಲ್ಲಿ ಪೊಲೀಸ್, ಆಂಬ್ಯಲೆನ್ಸ್, ಅಗ್ನಿಶಾಮಕದಳ ಸೇರಿದಂತೆ ಎಲ್ಲಾ ತುರ್ತು ಸೇವೆಗಳೂ ಒಂದೇ ಸಂಖ್ಯೆಯಲ್ಲಿ ನೆರವಿಗೆ ಬರಲಿದೆ. ಇನ್ನು ಮುಂದೆ ಯಾವುದೇ ತುರ್ತು ಸಂದರ್ಭವಾದರೂ ಸರಿ 112 ಸಹಾಯವಾಣಿಗೆ ಕರೆ ಮಾಡಿದರೆ ಸಾಕು ಎಲ್ಲಾ ರೀತಿಯ ನೆರವುಗಳು ತಕ್ಷಣವೇ ತಲುಪುವ ರೀತಿಯಲ್ಲಿ ನೂತನ ಸಹಾಯವಾಣಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಈವರೆಗೆ ಪೊಲೀಸ್ ಇಲಾಖೆ ಸಹಾಯವಾಣಿಗೆ 100, ಅಗ್ನಿ ಶಾಮಕ ದಳಕ್ಕೆ 101, ಆಂಬ್ಯುಲೆನ್ಸ್ 102, ಆರೋಗ್ಯ ಕವಚ ಆಂಬ್ಯುಲೆನ್ಸ್ಗೆ 108 ಸೇರಿದಂತೆ ಬೇರೆ ಬೇರೆ ಸಂಖ್ಯೆಗಳಿಗೆ ಕರೆ ಮಾಡಬೇಕಿತ್ತು. ಕೆಲವು ವೇಳೆ ತುರ್ತು ಸಂದರ್ಭದಲ್ಲಿ ಗಡಿಬಿಡಿಯಾಗಿ ನಿರ್ದಿಷ್ಟವಾದ ನಂಬರ್ಗಳು ನೆನಪಾಗದೆ ಸಂತ್ರಸ್ಥರು ಪರದಾಡುವಂತಾಗುತಿತ್ತು.ಕೆಲವು ವೇಳೆ ಈ ತುರ್ತು ಸಹಾಯವಾಣಿಗಳು ಬ್ಯೂಸಿ ಬಂದು ತಾಳ್ಮೆ ಪರೀಕ್ಷಿಸುತ್ತವೆ. ಈ ರಗಳೆಯನ್ನು ತಪ್ಪಿಸಲು 112 ರಾಷ್ಟ್ರೀಯ ತುರ್ತು ಸಹಾಯವಾಣಿಯನ್ನು ದೇಶಾದ್ಯಂತ ಸ್ಥಾಪಿಸಲಾಗುತ್ತಿದೆ. 100, 101, 102, 108 ಬದಲಾಗಿ 112 ಗೆ ಕರೆ ಮಾಡಿದರೆ ಬೆಂಕಿ ಅನಾಹುತ, ಅಪಘಾತ, ನೈಸರ್ಗಿಕ ವಿಕೋಪ ಸೇರಿದಂತೆ ಎಲ್ಲಾ ರೀತಿಯ ಸಹಾಯಗಳು ದೊರೆಯಲಿವೆ.

ರಾಷ್ಟ್ರೀಯ ಮಟ್ಟದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗುತ್ತಿರುವ ಈ ಸಹಾಯವಾಣಿಗೆ ರಾಜ್ಯದಲ್ಲಿ ಆರು ಜಿಲ್ಲೆಗಳಲ್ಲಿ ಜಾರಿಯಾಗುತ್ತಿದೆ. ಬೆಂಗಳೂರಿನಲ್ಲಿ ಕಮಾಂಡಿಗ್ ಸೆಂಟರ್ ಸ್ಥಾಪಿಸಲಾಗಿದೆ. ಈ ಸೆಂಟರ್ ಎಲ್ಲಾ ಜಿಲ್ಲೆಗಳ ಮೂಲೆ ಮೂಲೆಗಳಿಂದ ಬರುವ ಕರೆಗಳ ಮೇಲೆ ನಿಗಾ ವಹಿಸಲಿದೆ.

ಕರೆಗಳಿಗೆ ಸ್ಥಳೀಯವಾಗಿ ಜಿಲ್ಲಾ ಮಟ್ಟದಲ್ಲೇ ನೆರವಿನ ತಂಡಗಳು ಸ್ಪಂದಿಸಲಿವೆ. ಹಾಲಿ ಅಸ್ತಿತ್ವದಲ್ಲಿರುವ ಸಹಾಯವಾಣಿಗಳನ್ನು ಹಂತ ಹಂತವಾಗಿ ತೆಗೆದು 112 ಸಹಾಯವಾಣಿಯನ್ನು ಖಾಯಂ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಈ ಸಹಾಯವಾಣಿಗೆ ಸಂಚಾರಿ ವಾಹನಗಳಾಗಿ ಇನ್ನೋವ, ಸ್ಕಾರ್ಪಿಯೋದಂತಹ ಅತ್ಯಾಧುನಿಕ ವಾಹನ ನೀಡಲಾಗುತ್ತಿದೆ. ಬೆಂಗಳೂರು ಮಾದರಿಯಲ್ಲೆ ರಾಜ್ಯಾದ್ಯಂತ ತುರ್ತು ಸೇವೆಗಳು 10 ನಿಮಿಷದೊಳಗೆ ಸಿಗಲಿವೆ.










