ಅಂತರ್ಜಾತಿ ವಿವಾಹವಾದ ವಿಕಲಚೇತನ ಜೋಡಿಗೆ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್ ದೇವರಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಹುಟ್ಟಿನಿಂದಲೇ ವಾಕ್, ಶ್ರವಣ ಇಲ್ಲದ ಎನ್ ದೇವರಹಳ್ಳಿ ಗ್ರಾಮದ ಸಾವಿತ್ರಮ್ಮ ಹಾಗೂ ಆಂಧ್ರ ಮೂಲದ ಮಣಿಕಂಠ ಕಳೆದ ಮೂರು ವರ್ಷದ ಹಿಂದೆ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದರು ಪ್ರೀತಿಸಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ ತವರಿಗೆ ಹೆರಿಗೆಗೆ ಬಂದವಳು ಎಂಬ ಕನಿಕರ ಇಲ್ಲದೆ ಅಮಾನೀಯವಾಗಿ ವರ್ತಿಸಿ ಗ್ರಾಮಸ್ಥರು ತರಾಟೆ ತೆಗೆದು ದಂಪತಿಗೆ ಅಂತರ್ಜಾತಿ ಮದುವೆ ಆಗಿದ್ದಕ್ಕೆ 30,000 ರೂಪಾಯಿ ದಂಡ ವಿಧಿಸಿ ದಂಡ ಕಟ್ಟಿಸಿಕೊಂಡು ಊರಿನಿಂದ ಗ್ರಾಮದಿಂದ ಇಬ್ಬರನ್ನ ಬಹಿಷ್ಕಾರ ಹಾಕಿದ್ದಾರೆ.
ಅಲ್ಲದೇ ಹುಡುಗಿಯ ಕುಟುಂಬಕ್ಕೆ ಇಬ್ಬರನ್ನು ಮನೆಯಿಂದ ಹೊರ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಒಂದು ವೇಳೆ ಮನೆಯಿಂದ ಹೊರ ಹಾಕದಿದ್ದರೆ ಇಡೀ ಕುಟುಂಬವನ್ನು ಬಹಿಷ್ಕಾರ ಹಾಕುವಲಾಗುವುದು ಎಂದು ಬೆದರಿಕೆಯನ್ನು ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇವರಿಬ್ಬರಿಗೂ ಪ್ರೀತಿಸಿ 2021ರಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಇದೀಗ ಈ ದಂಪತಿಗಳಿಗೆ ಒಂದು ತಿಂಗಳ ಮಗು ಕೂಡ ಇದೆ. ಸಾವಿತ್ರಮ್ಮ ಹೆರಿಗೆಗಾಗಿ ಗ್ರಾಮದಲ್ಲಿರುವ ತವರಿನ ಮನೆಗೆ ಬಂದಿದ್ದರು ಎನ್ನಲಾಗಿದೆ.
ಬಹಿಷ್ಕಾರದಿಂದ ಬೇಸರಗೊಂಡ ಜೋಡಿ ತಮ್ಮ ಪುಟ್ಟ ಮಗುವಿನೊಂದಿಗೆ ಚಳ್ಳಕೆರೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.