ಸಾಲ ಪಡೆದವರು ಹಣ ವಾಪಸ್ ನೀಡದೆ ಸತಾಯಿಸಿದ್ದಕ್ಕೆ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಆಲಹಳ್ಳಿಯ ಲಾಡ್ಜ್ನಲ್ಲಿ ನಡೆದಿದೆ.
ವಿಶ್ವನಾಥ್ (30) ಮತ್ತು ಪತ್ನಿ ಸುಶ್ಮಿತಾ (25) ಆತ್ಮಹತ್ಯೆಗೆ ಶರಣಾದ ದಂಪತಿ.
ಸಾಲ ಪಡೆದವರು ಹಣ ವಾಪಸ್ ನೀಡದೆ ಸತಾಯಿಸುತ್ತಿದ್ದಾರೆ ಎಂದು ಮನನೊಂದ ದಂಪತಿ ಲಾಡ್ಜ್ ಒಂದರಲ್ಲಿ ತಮ್ಮ 3 ವರ್ಷದ ಹೆಣ್ಣು ಮಗು ಮಲಗಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಮೊಬೈಲ್ನಲ್ಲಿ ವೀಡಿಯೋ ಮಾಡಿ ವಾಟ್ಸಪ್ನಲ್ಲಿ ಸ್ನೇಹಿತರ ಗ್ರೂಪ್ಗೆ ಕಳುಹಿಸಿದ್ದಾರೆ.
ದಂಪತಿ ಜನವರಿ 28 ರಂದು ಆಲನಹಳ್ಳಿಯ ರಿಂಗ್ ರಸ್ತೆಯಲ್ಲಿನ ಲಾಡ್ಜ್ನಲ್ಲಿ ರೂಮ್ ಪಡೆದಿದ್ದರು. ಒಂದು ದಿನ ರೂಮ್ನಲ್ಲೇ ಇದ್ದು, ಬಳಿಕ ವೀಡಿಯೋ ರೆಕಾರ್ಡ್ ಮಾಡಿದ ವಿಶ್ವನಾಥ್ ನನ್ನಿಂದ ಸಾಲ ಪಡೆದ ಮೂವರು ಹಣ ವಾಪಸ್ ನೀಡುತ್ತಿಲ್ಲ. ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ಬಳಿಕ ಅದನ್ನು ವಾಟ್ಸಪ್ನಲ್ಲಿ ಸ್ನೇಹಿತರ 2 ಗ್ರೂಪ್ಗಳಿಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಬೆಳಕಿಗೆ ಬರುತ್ತಲೇ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಶ್ವನಾಥ್ ಸಹೋದರ ಶ್ಯಾಮ್ ಸುಂದರ್ ಆಲನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.