




ಕೆಲವು ದಿನಗಳ ಹಿಂದೆಯಷ್ಟೇ ಕೇರಳದ ವಯನಾಡ್ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ತನ್ನ ಇಡೀ ಕುಟುಂಬವನ್ನು ಕಳೆದುಕೊಂಡಿದ್ದ ಯುವತಿಗೆ ಈಗ ಮತ್ತೊಂದು ಭೀಕರ ಆಘಾತ ಉಂಟಾಗಿದೆ.
ಭೂ ಕುಸಿತದಲ್ಲಿ ತನ್ನ ಕುಟುಂಬದ ಒಂಬತ್ತು ಮಂದಿಯನ್ನು ಶೃತಿ ಕಳೆದುಕೊಂಡಿದ್ದಳು. ಆಕೆಗೆ ಡಿಸೆಂಬರ್ನಲ್ಲಿ ಮದುವೆ ಎಂದು ನಿಶ್ಚಯಿಸಲಾಗಿತ್ತು. ಆದರೆ, ಇದೀಗ ಶೃತಿಯ ಕೈ ಹಿಡಿಯಲಿದ್ದ ಹುಡುಗ ಜೆನ್ಸನ್ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಚಿಕಿತ್ಸೆ ಫಲಿಸದೆ ಬುಧವಾರ ಸಾವನ್ನಪ್ಪಿದ್ದಾನೆ. ಇದರೊಂದಿಗೆ ಕುಟುಂಬ ಸದಸ್ಯರನ್ನು ಕಳೆದುಕೊಂಡ ದುಃಖದಿಂದ ಕೊಂಚ ಚೇತರಿಸಿಕೊಳ್ಳುತ್ತಿದ್ದ ಶೃತಿಗೆ ಈಗ ಭಾವಿ ಪತಿಯ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ.
ಶೃತಿ ಮತ್ತು ಜೆನ್ಸನ್ ಮದುವೆ ನಿಶ್ಚಯವಾಗಿತ್ತು. ಈ ನಡುವೆ ಆಗಸ್ಟ್ನಲ್ಲಿ ವಯನಾಡ್, ಮೆಪ್ಪಾಡಿ ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿ ಶೃತಿ ಕುಟುಂಬದ 9 ಮಂದಿ ಸಾವನ್ನಪ್ಪಿದ್ದರು. ಭೂ ಕುಸಿತದಲ್ಲಿ ಶೃತಿ ಅವರ ಮನೆಯೂ ಕೊಚ್ಚಿ ಹೋಗಿತ್ತು. ಮದುವೆಗೆಂದು ಇರಿಸಿದ್ದ 4 ಲಕ್ಷ ರೂ. ಹಣ ಹಾಗೂ 15 ಪವನ್ ಚಿನ್ನವೂ ಮಣ್ಣುಪಾಲಾಗಿದೆ. ಇದೆಲ್ಲಾ ನಡೆದು 41 ದಿನಗಳ ಬಳಿಕ, ಶೃತಿಯ ಸಂಬಂಧಿಕರು ಮದುವೆ ತಯಾರಿಗೆ ಮುಂದಾಗಿದ್ದಾರೆ. ಈ ನಡುವೆ ತಮ್ಮವರನ್ನೆಲ್ಲಾ ಕಳೆದುಕೊಂಡು ಬೇಸರದಲ್ಲಿರುವ ಸಮಯದಲ್ಲಿ ಅದ್ದೂರಿ ಮದುವೆ ಬೇಡ, ರಿಜಿಸ್ಟರ್ ಮಾಡುವೆಯಾಗೋಣ ಎಂದು ಶೃತಿ ಹಾಗೂ ಜೆನ್ಸನ್ ನಿರ್ಧರಿಸಿದ್ದರು.
ಈ ನಡುವೆ ಮದುವೆ ತಯಾರಿ ನಡೆಸುತ್ತಿದ್ದಾಗ ಸೆ. 10ರಂದು ಮಂಗಳವಾರ ಶೃತಿ ಸಂಬಂಧಿಕರು ಹಾಗೂ ಜೆನ್ಸನ್ ಚಲಾಯಿಸುತ್ತಿದ್ದ ಕಾರು ಬಸ್ಸು ಡಿಕ್ಕಿ ಹೊಡೆದಿದೆ. ಜೆನ್ಸನ್ ಗಂಭೀರ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಏಟಾಗಿದ್ದರಿಂದ, ಚಿಕಿತ್ಸೆ ಫಲಿಸದೆ ಬುಧವಾರ ರಾತ್ರಿ ಜೆನ್ಸನ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಶೃತಿ ಹಾಗೂ ಜೆನ್ಸನ್ ಕುಟುಂಬಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸಾಂತ್ವನ ನುಡಿದಿದ್ದಾರೆ.








